ಹೊಸಪೇಟೆ (ವಿಜಯನಗರ) : ವಿಜಯನಗರ ಜಿಲ್ಲೆಯಲ್ಲಿ ಬಕ್ರೀದ್ ಹಾಗೂ ವಿವಿಧ ಹಬ್ಬಗಳ ದಿನಗಳಲ್ಲಿ ಅನಧೀಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಣೆ ತಡೆಗಟ್ಟಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಕ್ರೀದ್ ಹಾಗೂ ಇನ್ನಿತರ ಹಬ್ಬದ ದಿನಗಳಲ್ಲಿ ಒಂಟೆಗಳ ಗೋವುಗಳ ಹತ್ಯೆ ತಡೆಯಬೇಕಿದೆ. ಅನಧಿಕೃತ ಜಾನುವಾರು ಅಕ್ರಮ ಸಾಗಣೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾನೂನುಬಾಹೀರ ಪ್ರಾಣಿವಧೆಯನ್ನು ನಿಯಂತ್ರಿಸಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರನ್ವಯ ವಿಜಯನಗರ ಜಿಲ್ಲಾದ್ಯಂತ ಬಕ್ರೀದ್ ಹಾಗೂ ವಿವಿಧ ಹಬ್ಬದ ದಿನಗಳಲ್ಲಿ ಅನಧಿಕೃತವಾಗಿ ಪ್ರಾಣಿ ಸಾಗಣೆ ಮಾಡುವ ವಾಹನಗಳನ್ನು ತಪಾಸಣೆ ಮಾಡಿ ಅಂತಹ ವ್ಯಕ್ತಿ ಮತ್ತು ವಾಹನಗಳ ವಿರುದ್ಧ ಕಾನೂನಾತ್ಮಕ ಕ್ರಮ ವಹಿಸಬೇಕು. ಜಪ್ತಿ ಮತ್ತು ಪ್ರಾಣಿಗಳನ್ನು ರಕ್ಷಿಸಿ ಹತ್ತಿರದ ಗೋಶಾಲೆಗಳಿಗೆ ಸ್ಥಳಾಂತರಿಸಲು ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಸಹಾಯಕ ಆಯುಕ್ತರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಎಲ್ಲ ತಹಸೀಲ್ದಾರಗಳಿಗೆ, ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.