ವಿಜಯನಗರ.. ಹೊಸಪೇಟೆ: ಬಸವಣ್ಣನನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬೆನ್ನಲ್ಲೇ ನಾಡಿನ ಎಲ್ಲಡೆ ಬಸವ ಧರ್ಮದ ಪುನಶ್ಚೇತನಕ್ಕೆ ಹೋರಾಡಿದ ನೇತಾರರ ಜಯಂತಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ರಾಷ್ಟ್ರ ಧರ್ಮ ದೃಷ್ಟಾರ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಜಯಂತಿ ಮತ್ತು ಲಿಂಗೈಕ್ಯ ಡಾ.ಅಮರೇಶ್ವರ ಮತ್ತು ಲಿಂಗೈಕ್ಯ ಸುವರ್ಣಮ್ಮ ತಾಂಡೂರ್ ಅವರ ಸ್ಮರಣಾರ್ಥ ಇಷ್ಟಲಿಂಗ ಅಧ್ಯಯನ ಕೇಂದ್ರ ನಗರದಲ್ಲಿ ಏರ್ಪಡಿಸಿದ್ದ ದೇವದಾಸಿ ತಾಯಂದಿರ ಆಧ್ಯಾತ್ಮಿಕ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಲಿ ಬಸವರಾಜ , ಬಸವಣ್ಣನವರ ವಚನಗಳು ಹರ್ಡೇಕರ ಮಂಜಪ್ಪನವರ ಬದುಕನ್ನೇ ಬದಲಾಯಿಸಿ ಅವರನ್ನು ಭಾರತದ ರಾಷ್ಟ್ರ ಧರ್ಮ ದೃಷ್ಟಾರರನ್ನಾಗಿ ರೂಪಿಸಿದವು. ಕರ್ನಾಟಕ ಏಕೀಕರಣದ ರುವಾರಿಯಾಗಿ ಕರ್ನಾಟಕದ ಗಾಂಧಿ ಎಂದೇ ಹೆಸರು ಗಳಿಸಿಕೊಂಡರು. ದಲಿತರಿಗೆ ಮತ್ತು ದೇವದಾಸಿಗಳ ಮಕ್ಕಳಿಗೆ ಶಿಕ್ಷಣ ಅಸಾಧ್ಯವಾಗಿದ್ದ ಸಂದರ್ಭದಲ್ಲಿ ಬಸವಣ್ಣನ ವಚನಗಳು ಜ್ಞಾನದ ಖಡ್ಗವಾಗಿ ಮಂಜಪ್ಪನವರಿಗೆ ಲಭಿಸಿದವು ಎಂದರು.
ಇದೇ ಸಂದರ್ಭದಲ್ಲಿ ದೇಹವನ್ನು ದೇವಾಲಯವಾಗಿಸಿಕೊಳ್ಳವ ಸುಲಭ ವಿಧಾನ ಇಷ್ಟಲಿಂಗ ಪೂಜೆ-ಅನುಸಂಧಾನದ ಪ್ರಾತ್ಯಕ್ಷಿಕೆಯನ್ನು ಡಾ. ಅಜಯ್ ಕುಮಾರ ತಾಂಡೂರ್ ನಡೆಸಿಕೊಟ್ಟರು. ಶರಣೆ ಸ್ವರೂಪ ಅಜಯ್ ಕುಮಾರ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ , ಹಡಗಲಿ ,ಕೊಟ್ಟೂರು , ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ಭಾಗಗಳಿಂದ ಆಗಮಿಸಿದ್ದ ನೂರು ಜನ ದೇವದಾಸಿ ತಾಯಂದಿರಿಗೆ ರುದ್ರಾಕ್ಷಿ ಕಂಕಣ ಕಟ್ಟಿ ಸೀರೆ ಕೊಟ್ಟು ಉಡಿ ತುಂಬಿದರು. ಗೌರವ ಸ್ವೀಕರಿಸಿ ಮಾತಾಡಿದ ತಾಯಂದಿರು ಅರಿವು ಆಚಾರ ಅನುಭಾವ ಟ್ರಸ್ಟ್ ನವರು ನಮ್ಮಗೆ ತವರುಮನೆಯ ಸದಸ್ಯರಾಗಿ ಪ್ರೀತಿ ತೋರಿಸುತ್ತಾರೆ ಎಂದರು. ಸಖಿ ಸಂಸ್ಥೆಯ ಮುಖ್ಯಸ್ಥೆ ಡಾ. ಭಾಗ್ಯಲಕ್ಷ್ಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಾಧ್ಯಾಪಕ ಡಾ ಬಸವರಾಜ ಪ್ರಾಸ್ತಾವಿಕವಾಗಿ ಮಾತಾಡಿ , ಎಲ್ಲಾ ತಾಯಂದಿರು ತಮ್ಮ ಮಕ್ಕಳನ್ನು ಹರ್ಡೇಕರ ಮಂಜಪ್ಪನವರಂತಾಗಲು ಉತ್ತೇಜಿಸಬೇಕು ಎಂದರು. ಮರಿಯಮ್ಮನಹಳ್ಳಿಯ ಮಂಜುಳಾ ಮತ್ತು ಶಿಷ್ಯ ಬಳಗ ಬಸವತತ್ವದೊಂದಿಗಿನ ತಮ್ಮ ಅನುಭಾವ ಹಂಚಿಕೊಂಡರು. ಹಿರಿಯರಾದ ಡಾ ಮಹಾಬಲೇಶ್ವರ ರೆಡ್ಡಿ , ಬಿ ಜಿ ಈಶ್ವರಪ್ಪ ಸೇರಿದಂತೆ ಇಷ್ಟಲಿಂಗ ಅಧ್ಯಯನ ಕೇಂದ್ರ , ಬಸವ ಬಳಗ , ಸಖೀ ಸಂಸ್ಥೆ , ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿದ್ದರು.