ಅಯೋಧ್ಯೆಯದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ   ವಿಧಾನಗಳು:                                       

Loading

ಪ್ರಾಣ ಪ್ರತಿಷ್ಠಾಪನೆ ಎಂದರೇನು?

ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮಮಂದಿರ ಉದ್ಘಾಟನೆಯಾಗಲಿದೆ ಎಂಬ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ. ಆದರೆ ವಸ್ತುಸ್ಥಿತಿಯಲ್ಲಿ ಆ ದಿನ ಬಾಲರಾಮನ ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನ ವಿಧಿಗಳು ಮುಕ್ತಾಯಗೊಳ್ಳಲಿವೆ. ಜ. 16ರಿಂದ ಈ ವಿಧಿಗಳು ಶುರುವಾಗಲಿದೆ. ಅರ್ಥಾತ್‌ ಸತತ 7 ದಿನಗಳು ಪ್ರಾಣಪ್ರತಿಷ್ಠಾಪನ ವಿಧಿಗಳನ್ನು ವಿವಿಧ ಹಂತಗಳಲ್ಲಿ ನೆರವೇರಿಸಲಾಗುತ್ತದೆ. ಯಾವುದೇ ದೇಗುಲದ ಆರಂಭವೆಂದರೆ, ಪ್ರಾಣ ಪ್ರತಿಷ್ಠಾಪನೆಯನ್ನೇ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಅಂದರೇನು? ಏನೇನು ನಡೆಯುತ್ತವೆ? ಎಂಬ ವಿವರಗಳು ಇಲ್ಲಿವೆ.

ಸಾಮಾನ್ಯವಾಗಿ ಗುರುಗಳು, ತಂತ್ರಿಗಳು, ಸಿದ್ಧಪುರುಷರು, ತಮ್ಮ ದಿವ್ಯದೃಷ್ಟಿಯಿಂದ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ವಿಗ್ರಹದ ರೂಪ ಹೇಗಿರಬೇಕು, ಎಷ್ಟು ಅಳತೆ ಹೊಂದಿ ರಬೇಕು ಎನ್ನುವುದನ್ನು ಸೂಚಿಸು ತ್ತಾರೆ. ಅದನ್ನು ಆಧಾರ ವಾಗಿಟ್ಟುಕೊಂಡು ಶಿಲ್ಪಿಯೊಬ್ಬರು ವಿಗ್ರಹವನ್ನು ಕೆತ್ತುತ್ತಾರೆ. ಸಿದ್ಧವಾದ ವಿಗ್ರಹಕ್ಕೆ ಶಿಲ್ಪಿ ತಾನು ಮೊದಲು ಪೂಜೆ ಮಾಡಿ (ಇದೊಂದು ವಿಧಿ) ಸಂಬಂಧಿಸಿದವರಿಗೆ ಹಸ್ತಾಂತರಿಸುತ್ತಾನೆ. *ಆ ವಿಗ್ರಹದಲ್ಲಿ ನಿರ್ದಿಷ್ಟ ದೇವತೆಯ ಶಕ್ತಿಯನ್ನು ತುಂಬಿ, ಆ ಶಕ್ತಿಯನ್ನು ಪ್ರಕಟವಾಗುವಂತೆ ಮಾಡುವುದೇ ಪ್ರಾಣ ಪ್ರತಿಷ್ಠಾಪನೆ. ಇನ್ನೂ ಸರಳವಾಗಿ ಹೇಳುವುದಾದರೆ ವಿಗ್ರಹದಲ್ಲಿ ಪ್ರಾಣವನ್ನು ಪ್ರತಿಷ್ಠಾಪಿಸುವುದೇ ಪ್ರಾಣ ಪ್ರತಿಷ್ಠಾಪನೆ.

ಯಜುರ್ವೇದ, ಅಥರ್ವಣ ವೇದ, ಆಗಮಶಾಸ್ತ್ರಗಳು, ವಿವಿಧ ಪುರಾಣಗಳಲ್ಲಿ, ತಂತ್ರಶಾಸ್ತ್ರಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಹೇಗೆ ಮಾಡ ಬೇಕೆಂಬ ವಿಧಿಗಳನ್ನು ಹೇಳಲಾಗಿದೆ. ಅದರ ಆಧಾರದಲ್ಲೇ ಶ್ರೀರಾಮಮಂದಿರ ದಲ್ಲೂ ಪ್ರಾಣ ಪ್ರತಿಷ್ಠಾಪನ ವಿಧಿಗಳು ನಡೆಯ ಲಿವೆ. ಒಟ್ಟಾರೆ ಎಲ್ಲ ಕಡೆ ನಡೆಸುವ ಪ್ರಾಣ ಪ್ರತಿಷ್ಠಾಪನೆಯಲ್ಲಿ ಏನೇನು ಕ್ರಿಯೆಗಳು ಇರಲಿವೆ ಎಂಬುದರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಶೋಭಾಯಾತ್ರೆ: ದೇಗುಲದಲ್ಲಿ ಪ್ರತಿಷ್ಠಾಪಿಸುವ ವಿಗ್ರಹವನ್ನು ಪೂರ್ಣಕುಂಭಗಳೊಂದಿಗೆ ಯಾತ್ರೆಯಲ್ಲಿ ತೆಗೆದುಕೊಂಡು    ಬರಲಾಗುತ್ತದೆ.ಇದೇ ಶೋಭಾ ಯಾತ್ರೆ.

  ಜ.17 ರಂದು ಬಾಲರಾಮನ ಮೂರ್ತಿಯ ಮೆರವಣಿಗೆಯನ್ನು ದೇವಸ್ಥಾನ ಆವರಣದೊಳಗೆ ನಡೆಸಲಾಗುವುದು.

ದಶವಿಧ ಸ್ನಾನ: ವಿಗ್ರಹಕ್ಕೆ 10 ರೀತಿಯಲ್ಲಿ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಇದರಲ್ಲಿ ಆರಂಭದ ಐದು ಪ್ರಕ್ರಿಯೆಗಳು ನಿತ್ಯ ಪೂಜೆಯಲ್ಲಿ ಬಳಕೆಯಲ್ಲಿರುವ ವಿಧಿಗಳು.ಆಗ್ಯ (ಕೈಗಳನ್ನು ನೀರಿನಿಂದ ತೊಳೆಯುವುದು), ಪಾದ್ಯ (ಪಾದವನ್ನು ತೊಳೆಯು ವುದು), ಆಚಮ ನೀಯ (ಮಂತ್ರಗಳಿಂದ ಶುದ್ಧಿ ಮಾಡಲ್ಪಟ್ಟ ನೀರನ್ನು ಕುಡಿಸುವುದು), ಮುಖಾಚಮನೀಯ (ಮುಖವನ್ನು ತೊಳೆಯುವುದು), ಸ್ನಾನೀಯ (ವಿಗ್ರಹವನ್ನು ಪೂರ್ಣ ತೊಳೆಯುವುದು) ಆರಂಭದ ಐದು ವಿಧಿಗಳು. ನಂತರ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ದಿಂದ ವಿಗ್ರಹ ವನ್ನು ಶುದ್ಧಿ ಮಾಡಲಾಗುತ್ತದೆ. ಇದು ದಶವಿಧ ಸ್ನಾನ. ಅನಂತರ ದರ್ಬೆ ಯನ್ನಿಟ್ಟುಕೊಂಡು ವಿಗ್ರಹದ ಮೇಲೆ ನೀರನ್ನು ಹಾಕಲಾಗುತ್ತದೆ. ಇದಕ್ಕೆ *ಕುಶೋದಕ* ಎನ್ನುತ್ತಾರೆ. ಕಡೆಗೆ ಶುದ್ಧ ನೀರಿನಿಂದ ಅಭಿಷೇಕ ಮಾಡು ತ್ತಾರೆ. ಇದೇ ಶುದ್ದೋದಕ ಸ್ನಾನ. ಮುಖ್ಯವಾಗಿ 10 ವಿಧವಾದರೂ, ಒಟ್ಟಾರೆ 12 ರೀತಿಯಲ್ಲಿ ಸ್ನಾನಗಳಿರುತ್ತವೆ.

ಅಧಿವಾಸ: ವಿಗ್ರಹವನ್ನು ಪ್ರಾಣಪ್ರತಿಷ್ಠೆಗೆ ಸಿದ್ಧಮಾಡಲು, ಶುದ್ಧಿ ಮಾಡಲು ವಿವಿಧ ಕ್ರಿಯೆಗಳನ್ನು ನಡೆಸಲಾಗುತ್ತದೆ. ಅದರಲ್ಲೊಂದು *ಅಧಿವಾಸ*. ಅಂದರೆ ವಿಗ್ರಹವನ್ನು ಒಂದೊಂದು ರಾತ್ರಿ ಒಂದೊಂದು ಪದಾರ್ಥಗಳಲ್ಲಿ ಮುಳುಗಿಸಿಡುವ ಒಂದು ಕ್ರಿಯೆ. ನೀರಿನಲ್ಲಿ ಮುಳುಗಿಸಿಟ್ಟರೆ ಅದು ಜಲಾಧಿ ವಾಸ ಧಾನ್ಯದಲ್ಲಿ ಮುಳುಗಿಸಿಟ್ಟರೆ ಅದು ಧಾನ್ಯಾಧಿವಾಸ ಜ.20ರಂದು ಬಾಲ ರಾಮನಿಗೆ ಅನ್ನಾಧಿವಾಸ(ಅಕ್ಕಿ ಮತ್ತು ಇತರೆ ಧಾನ್ಯಗಳಲ್ಲಿ ವಿಗ್ರಹವನ್ನು ಮುಳುಗಿಸಿಡುವ ಕ್ರಿಯೆ) ಮಾಡಲಾಗುತ್ತದೆ. ಜ.21ರಂದು ಶಯಾನಾಧಿವಾಸ ವಿರುತ್ತದೆ. ಅಂದರೆ ವಿಗ್ರಹವನ್ನು ಪ್ರತಿಷ್ಠಾಪನೆಗೂ ಹಿಂದಿನ ರಾತ್ರಿ ಮಲಗಿಸಿಡಲಾಗುತ್ತದೆ.

ಪ್ರಾಣಪ್ರತಿಷ್ಠಾಪನೆ: ಅಂತಿಮ ವಿಧಿಯೇ ಪ್ರಾಣ ಪ್ರತಿಷ್ಠಾಪನೆ ನಿರ್ದಿಷ್ಟ ವಿಗ್ರಹಕ್ಕೆ ವಿವಿಧ ರೀತಿಯ ದೈವೀಶಕ್ತಿಗಳನ್ನು ತುಂಬ ಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಮಂತ್ರಗಳನ್ನು ಹೇಳಿ, ಯಜ್ಞ ಮಾಡಲಾಗುತ್ತದೆ, ಯಜ್ಞಕುಂಡಕ್ಕೆ ಕಟ್ಟಿದ ದಾರ ವನ್ನು (ಸೂತ್ರ) ವಿಗ್ರಹಕ್ಕೆ ಸುತ್ತಲಾಗಿರುತ್ತದೆ. ದೇವತೆಯ ಕಣ್ಣುಗಳಿಗೆ ಸೂರ್ಯನ ಶಕ್ತಿ, ಕಿವಿಗಳಿಗೆ ವಾಯು ವಿನ ಶಕ್ತಿ, ಮನಸ್ಸಿಗೆ ಚಂದ್ರಶಕ್ತಿಯನ್ನು, ಕೈ, ಕಾಲುಗಳಿಗೆ ಇನ್ನಿತರೆ ದೇವತೆಗಳ ಶಕ್ತಿಯನ್ನು ತುಂಬಲಾಗುತ್ತದೆ. ಅಂತಿಮವಾಗಿ ಚಿನ್ನದ ಸೂಜಿಯಿಂದ, ವಿಗ್ರಹದ ಕಣ್ಣುಗಳಿಗೆ ಅಂಜನವನ್ನು ಹಚ್ಚಲಾಗುತ್ತದೆ. ಆಗ ವಿಗ್ರಹದ ಕಣ್ಣು ತೆರೆಯುತ್ತದೆ. ನಂತರ ಸಾಮಾನ್ಯವಾಗಿ ಕಲಾವೃದ್ಧಿ ಹೋಮವನ್ನು ಮಾಡುತ್ತಾರೆ.

108 ರೀತಿ ದ್ರವ್ಯಗಳ ಅಭಿಷೇಕ: ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡುವ ಮುನ್ನ ಅದಕ್ಕೆ 108 ರೀತಿಯ ದ್ರವ್ಯಗಳ ಅಭಿಷೇಕ ಮಾಡಲಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ (ಪಂಚಾಮೃತ), ವಿವಿಧ ಹೂವುಗಳು, ಹಣ್ಣುಗಳಿಂದ ಅಭಿಷೇಕ ಮಾಡಿಸಿ ವಿಗ್ರಹವನ್ನು ಪವಿತ್ರಗೊಳಿಸಲಾಗುತ್ತದೆ.

ಅಭಿಜಿನ್‌ ಮುಹೂರ್ತ: ಜ.22ರಂದು ಪಂಚಾಂಗದ ಪ್ರಕಾರ ಮೃಗಶಿರಾ ನಕ್ಷತ್ರವಿದೆ. ಆ ದಿನ ಮಧ್ಯಾಹ್ನ 12.15ರಿಂದ 12.45ರ ನಡುವೆ ವಿಗ್ರಹ ವನ್ನು ಗರ್ಭಗುಡಿ ಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುತ್ತದೆ. ಈ ಸಮಯದಲ್ಲಿ ಅಭಿಜಿನ್‌ ಮುಹೂರ್ತವಿರುತ್ತದೆ. ಇದೇ ಸಮಯದಲ್ಲಿ ರಾಮನ ಜನನ ವಾಯಿತು ಎಂಬ ಕಾರಣದ ಜತೆಗೆ, ಈ ವೇಳೆ ಅಮೃತ ಸಿದ್ಧಿಯೋಗ ಸರ್ವಾರ್ಥ ಸಿದ್ಧಿಯೋಗಗಳಿವೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ.

ಯಾವ್ಯಾವ ದಿನ? ಏನೇನು ನಡೆಯುತ್ತದೆ?
ಜ.16 ದಶವಿಧ ಸ್ನಾನ
ಜ.17 ಗಣೇಶ, ಅಂಬಿಕಾ ಪೂಜೆ
ಜ.18 ವಾಸ್ತು-ವರುಣ ಪೂಜೆ
ಜ.19 ನವಗ್ರಹ ಸ್ಥಾಪನೆ
ಜ.20 ವಾಸ್ತುಶಾಂತಿ ಮತ್ತು ಅನ್ನಾಧಿವಾಸ
ಜ.21 ಶಯ್ನಾಧಿವಾಸ
ಜ.22 ಪೂಜೆ,  ಪ್ರಾಣಪ್ರತಿಷ್ಠಾಪನೆ

ಮಾಹಿತಿ, ಸಂಗ್ರಹ : ಕೆ, ಶಾಂತರಾಜ್, ಮೇದಾರ್
                       ಹೊಸಪೇಟೆ.ವಿಜಯನಗರಜಿಲ್ಲೆ

Leave a Reply

Your email address will not be published. Required fields are marked *