
ಕನಕಗಿರಿ: ಶೀಘ್ರದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಹೊಂದಿದವರು ನಮೂನೆ-18 ರಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ತಾಲೂಕು ಆಡಳಿತ ಕಚೇರಿಗೆ ಸಲ್ಲಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ತಿಳಿಸಿದರು.
ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಗ್ರಾ.ಪಂ ಯಿಂದ ಮತದಾರರ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡು ಅವರು ಮಾತನಾಡಿದರು. ಕಡ್ಡಾಯವಾಗಿ ಪದವಿ ಮುಗಿಸಿದ ಎಲ್ಲಾ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ನಮೂನೆ-18 ನ್ನು ಉಚಿತವಾಗಿ ತಹಶೀಲ್ದಾರ್ ಕಚೇರಿಯ ಮೂಲಕ ನೀಡಲಾಗುತ್ತಿದೆ. ಅದಕ್ಕಾಗಿ ಅಗತ್ಯ ದಾಖಲೆಗಳಾದ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಚೀಟಿ, 2 ಪಾಸಪೋರ್ಟ್ ಸೈಜ್ ಪೋಟೋ ಲಗತ್ತಿಸಿ ಅರ್ಜಿ ಸಲ್ಲಿಸಲು ತಿಳಿಸಿದರು.
ನಂತರ ಪದವಿ ಮುಗಿಸಿದ ಹಲವರಿಗೆ ಸ್ಥಳದಲ್ಲೇ ಅರ್ಜಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತಾ, ಗ್ರಾ.ಪಂ ಪಿಡಿಓ ಯು.ಮಲ್ಲಿಕಾರ್ಜುನ್, ಗ್ರಾ.ಪಂ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಸದಸ್ಯರಾದ ಯಮನೂರಪ್ಪ, ಹನುಮೇಶ್, ಕರಿಯಪ್ಪ, ತಾ.ಪಂ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಬೆಸ್ಟ್ ಪಿಯು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.