
ಹೊಸಪೇಟೆ(ವಿಜಯನಗರ): ಆ.28ವಿದ್ಯಾರ್ಥಿಗಳು ಕಲಿಕಾಭ್ಯಾಸದ ಜೊತೆಜೊತೆಗೆ ಕ್ರೀಡೆಯತ್ತ ಗಮನ ಹರಿಸಿ ಬೌದ್ಧಿಕ ಮತ್ತು ದೈಹಿಕ ಶಕ್ತಿ ರೂಪಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಅವರು ತಿಳಿಸಿದರು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸೋಮವಾರ ನಗರದ ವಿಜಯನಗರ ಕಾಲೇಜಿನಲ್ಲಿ ಹೆಚ್ಐವಿ/ಏಡ್ಸ್ ನಿಯಂತ್ರಣ, ಜಾಗೃತಿಗಾಗಿ ಹಮ್ಮಿಕೊಂಡಿದ್ದ ಯುವಜನೋತ್ಸವ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡುವ ಸಮಯದಲ್ಲಿ ಅವರು ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಮೇಲೆ ಕಾಳಜಿ ಹಾಗೂ ಮಾರಕ ರೋಗಗಳ ಕುರಿತು ಜಾಗೃತಿ ಅತ್ಯವಶ್ಯಕವಾಗಿರುತ್ತದೆ. ತಾವು ಜಾಗೃತಿ ಹೊಂದಿ ಇತರರಿಗೂ ಪರಿಣಾಮಕಾರಿಯಾಗಿ ಜಾಗೃತಿ ಮೂಡಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಅವರದೀ ಹಿಂದೆ ಹಿಂದುಳಿದ ರಾಷ್ಟಗಳಲ್ಲಿ ಹೆಚ್ಐವಿ ಹರಡುತ್ತದೆ ಎಂಬ ಕಳಂಕ ಇತ್ತು. ಹೆಚ್ಚಿನ ಜಾಗೃತಿ ಹಾಗೂ ನಿಯಂತ್ರಣ ಸಾಧನಗಳ ಬಳಕೆಯಿಂದ ರೋಗ ಹಂತಹAತವಾಗಿ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿ ರೋಗದ ವಿರುದ್ದ ಅರಿವನ್ನು ಇತರರಿಗೂ ತಲುಪಿಸಬೇಕು ಎಂದರು.
ಜಿಲ್ಲಾ ಕೇಂದ್ರ ಹೊಸಪೇಟೆ ತಾಲ್ಲೂಕು ಸೇರಿದಂತೆ ಬಳ್ಳಾರಿ-ವಿಜಯನಗರ ಜಿಲ್ಲೆಗಳ ವಿವಿಧ ತಾಲ್ಲೂಕಿನ ವಿದ್ಯಾರ್ಥಿಗಳು ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜಯನಗರ ಕಾಲೇಜು ಬಳಿಯಿಂದ ಆರಂಭಗೊAಡ ಮ್ಯಾರಥಾನ್ ಸ್ಪರ್ಧೆ ಮಾರ್ಕಂಡೇಶ್ವರ ದೇವಸ್ಥಾನ ರಸ್ತೆ, ವಾಲ್ಮೀಕಿ ವೃತ್ತ, ಮದಕರಿನಾಯಕ ವೃತ್ತ, ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಕನಕದಾಸ ವೃತ್ತ, ಚಿತ್ತವಾಡ್ಗಿ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಂದು ಪುನೀತ್ ರಾಜ್ಕುಮಾರ್ ವೃತ್ತದ ಬಳಿ ಕೊನೆಗೊಂಡಿತು. 5 ಕಿಮೀ. ದೂರದ ಮ್ಯಾರಥಾನ್ ಸ್ಪರ್ಧೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾರ್ಥಿಗಳಿಗೆ ಮಾರ್ಗ ಅನುಕೂಲವಾಗಲು ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಮುಖ ವೃತ್ತದ ಬಳಿ ಹಸಿರು ಬಾವುಟ ಹಿಡಿದಿದ್ದರು. ಮ್ಯಾರಥಾನ್ ಮಾರ್ಗದಲ್ಲಿ ಆಂಬುಲೆನ್ಸ್ ವ್ಯವಸ್ಥೆ ನಿಯೋಜಿಸಲಾಗಿತ್ತು.
5 ಕಿಮೀ. ಮಾರ್ಗದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚನ್ನಕೇಶವ, ತಿಪ್ಪೇಶ ಹಾಗೂ ವಿನಾಯಕ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಸಂಗೀತ, ಎನ್.ಪವಿತ್ರ ಹಾಗೂ ಸುಮಾ ಕ್ರಮವಾಗಿ ಪ್ರಥಮ, ದ್ವಿತೀಯಾ ಮತ್ತು ತೃತೀಯ ಸ್ಥಾನ ಪಡೆದುಕೊಂಡರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 5 ಸಾವಿರ, 3.5 ಸಾವಿರ ಹಾಗೂ 2 ಸಾವಿರ ರೂ. ನಗದು ಮತ್ತು ಪ್ರಮಾಣಪತ್ರ ನೀಡಲಾಯಿತು. ಸಮಾಧಾನಕರ ಬಹುಮಾನ ಪಡೆದ 7 ಜನ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ನಗದು, ಪ್ರಮಾಣ ಪತ್ರ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಭಾಸ್ಕರ್, ಡಾ.ಸೋಮಶೇಖರ್, ಡಾ.ಜಗದೀಶ್ ಪಾಟ್ನೆ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.