ಸೆ.15 ರಂದು ವಿಶೇಷ ಕಾರ್ಯಕ್ರಮ ಬೃಹತ್ ಮಾನವ ಸರಪಳಿ ಆಯೋಜನೆ.ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನದ ಸಿದ್ಧತೆಗೆ ಜಿಲ್ಲಾಧಿಕಾರಿಗಳ ಸೂಚನೆ

Loading

ಹೊಸಪೇಟೆ (ವಿಜಯನಗರ) : ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಗಸ್ಟ್ 30ರಂದು ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂದು ವಿಜಯನಗರ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಮುನಿರಾಬಾದ್‌ನ ನಿಂದ ತೊರಣಗಲ್ಲವರೆಗೆ ಒಟ್ಟು 49 ಕಿ.ಮೀ ವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಾರಿಯುದ್ದಕ್ಕೂ ಪಸರಿಸುವ ಉದ್ದೇಶ ಹೊಂದಿದೆ. ಈ ನಿಮಿತ್ತ ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಸಂವಿಧಾನದ ಗೌರವ, ಘನತೆ ಹೆಚ್ಚಿಸುವ ಮತ್ತು ಸಾಂಸ್ಕೃತಿಕ ಮಹತ್ವ ಸಾರಿ ಹೇಳುವಂತಹ ಮಾನವ ಸರಪಳಿಯನ್ನು ರಚಿಸಿ ಯಶಸ್ವಿಗೊಳಿಸಬೇಕು. ಯಾವುದೇ ಲೋಪ ಆಗದಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಕಾರ್ಯಕ್ರಮದ ಯಶಸ್ವಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಪ್ರತಿ 1 ಕಿ.ಮೀ. ವ್ಯಾಪ್ತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಮತ್ತು ಪ್ರತಿ 3 ಕಿ.ಮೀ ವ್ಯಾಪ್ತಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ ಎಂದು ತಿಳಿಸಿದರು.

ಮಾನವ ಸರಪಳಿ ಸಾಗುವ ದಾರಿಯಲ್ಲಿನ ಗ್ರಾಮ ಪಂಚಾಯಿತಿಗಳ ಪಿ.ಡಿ.ಓ ಗಳನ್ನು ಏರಿಯಾ ಆಪೀಸರ್‌ಗಳನ್ನಾಗಿ ನೇಮಿಸಲಾಗುವುದು ಹಾಗೂ ಗ್ರಾಮಗಳಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನೀರಿಕ್ಷಕರನ್ನು ಗ್ರಾಮ ಉಸ್ತುವಾರಿಗಳನ್ನಾಗಿ ನೇಮಿಸಲಾಗುವುದು ಎಂದು ತಿಳಿಸಿದರು.

ಮಾನವ ಸರಪಳಿ ರಚನೆ ವೇಳೆ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯಿಂದ ನುರಿತ ಸಿಬ್ಬಂದಿ ಸಹಿತ ಚಿಕಿತ್ಸಾ ಸೌಲಭ್ಯ ಇರುವ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು‌.

ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಆಗಬೇಕು.ಪ್ರೌಢಶಾಲೆ, ಕಾಲೇಜ್ ಮತ್ತು ವಿದ್ಯಾರ್ಥಿನಿಲಯಗಳಿಂದ ಮಕ್ಕಳನ್ನು ಕರೆ ತರಲು ಕನಿಷ್ಠ 100 ಬಸ್ಸುಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.

ರೂಟ್ ಮ್ಯಾಪ್ ಗ್ರಾಮಗಳು: ಮುನಿರಾಬಾದ್, ಟಿ.ಬಿ.ಡ್ಯಾಂ ಗಣೇಶ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ, ಸಿದ್ಧಿಪ್ರಿಯಾ ಕಲ್ಯಾಣ ಮಂಟಪ, ಕೇಂದ್ರ ಬಸ್ ನಿಲ್ದಾಣ, ಪುಣ್ಯಮೂರ್ತಿ ಸರ್ಕಲ್, ಬಸ್ ಡಿಪೋ, ಬಳ್ಳಾರಿ ರೋಡ್, ಹೆಚ್‌ಸಿಎಲ್ ಕಾಲುವೆ, ಕಾರಿಗನೂರು, ವಡ್ಡರಹಳ್ಳಿ, ಪಾಪಿನಾಯಕನಹಳ್ಳಿ, ಬಯಲುವದ್ದಿಗೆರಿ, ಧರ್ಮಸಾಗರ, ಗಾದಿಗನೂರು ಮಾರ್ಗವಾಗಿ ತೋರಣಗಲ್ಲವರೆಗೆ ಒಟ್ಟು 49 ಕಿ.ಮೀವರೆಗೆ ಮಾನವ ಸರಪಳಿ ರಚನೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿಗಳಾದ ನೊಂಗ್ಜಾಯ್ ಮಹಮ್ಮದ್ ಅಲಿ ಅಕ್ರಮ ಷಾಹ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ್ ಹೆಚ್.ಎಸ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದುಗಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರಪ್ಪ ಕೆ.ಬಿ., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್. ತಳಿಕೆರೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *