
ಹೊಸಪೇಟೆ (ವಿಜಯನಗರ) : ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಮಲಪನಗುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಕಡ್ಡಿರಾಂಪುರ ತಾಂಡ, ಗಾಳೆಮ್ಮನಗುಡಿ, ಹೊಸ ಮಲಪನಗುಡಿ ಮತ್ತು ಹಳೆ ಮಲಪನಗುಡಿ ಗ್ರಾಮಗಳಿಗೆ ಇತ್ತೀಚೆಗೆ ಖುದ್ದು ಭೇಟಿ ನೀಡಿ ಗ್ರಾಮಸ್ಥರ ಆಹವಾಲು ಆಲಿಸಿದರು. ಬಳಿಕ ಶಾಸಕರ ಜನ ಸಂಪರ್ಕ ಸಭೆ ನಡೆಸಿ ಜನತೆಗೆ ಸ್ಪಂದನೆ ನೀಡಿದರು.

ವಿವಿಧ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ಸಂಚಾರ ಕೈಗೊಂಡ ಶಾಸಕರು, ಮೊದಲಿಗೆ ಕಡ್ಡಿರಾಂಪುರ ತಾಂಡಾ ಮತ್ತು ಕಡ್ಡಿರಾಂಪುರ ಗ್ರಾಮಕ್ಕೆ ತೆರಳಿ ಮನೆಮನೆ ಭೇಟಿ ನಡೆಸಿದರು. ಗ್ರಾಮಸ್ಥರ ಮನವಿಯ ಮೇರೆಗೆ ಅಲ್ಲಿನ ಶ್ರೀ ಸೇವಾಲಾಲ ದೇವಸ್ಥಾನ ಜಾಗ ನೋಂದಣಿಯ ಬಗ್ಗೆ ಪರಿಶೀಲಿಸಿ, ನಿರ್ಮಾಣ ಕಾರ್ಯವನ್ನು ಬೇಗನೆ ಪೂರ್ಣಗೊಳಿಸುವಂತೆ ಕ್ರಮ ವಹಿಸಲು ಸೂಚನೆ ನೀಡಿದರು. ಗ್ರಾಮದಲ್ಲಿ ಈಗಾಗಲೇ ಸ್ಥಗಿತಗೊಂಡು ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಕಟ್ಟಡದ ಸ್ಥಳ ವೀಕ್ಷಿಸಿ ಅಲ್ಲಿ ಗ್ರಂಥಾಲಯ ಸೇರಿದಂತೆ ಬೇರೆ ಉದ್ದೇಶಕ್ಕೆ ಆ ಜಾಗ ಬಳಸಲು ಕ್ರಮ ವಹಿಸುವಂತೆ ತಾಪಂ ಇಓ ಅವರಿಗೆ ನಿರ್ದೇಶನ ನೀಡಿದರು. ಇದೆ ವೇಳೆ ಶುದ್ಧ ಕುಡಿಯುವ ನೀರಿನ ಘಟಕದ ವೀಕ್ಷಣೆ ನಡೆಸಿದರು. ಘಟಕವು ಏಕೆ ಸ್ಥಗೀತವಾಗಿದೆ ಎಂದು ಅಧಿಕಾರಿಗಳಿಗೆ ಕೇಳಿ ಅದನ್ನು ಕೂಡಲೇ ಸರಿ ಮಾಡಬೇಕು ಎಂದು ಏಜೆನ್ಸಿಯವರಿಗೆ ತಿಳಿಸಲು ಶಾಸಕರು ನಿರ್ದೇಶನ ನೀಡಿದರು. ಶಾಸಕರು ನಿರ್ದೇಶನ ನೀಡಿದ ಕೆಲವೇ ಗಂಟೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವು ದುರಸ್ಥಿಯಾಗಿ ಅದಕ್ಕೆ ಚಾಲನೆ ಸಿಕ್ಕಿದ್ದು ವಿಶೇಷವಾಗಿತ್ತು.
ಬಳಿಕ ಶಾಸಕರು ಗಾಳೆಮ್ಮನಗುಡಿ ಗ್ರಾಮಕ್ಕೆ ತೆರಳಿದರು. ‘ಗಾಳೆಮ್ಮನಗುಡಿಯ ಬಹಳಷ್ಟು ನಿವಾಸಿಗಳು ಬಾಡಿಗೆಯ ಮನೆಯಲ್ಲಿಯೇ ವಾಸ ಮಾಡುತ್ತಿದ್ದೇವೆ. ನಮಗೆ ಮನೆಕಟ್ಟಿಕೊಳ್ಳಲು ಜಾಗ ಸಿಗುತ್ತಿಲ್ಲ’ ಎಂದು ಅಲ್ಲಿನ ನಿವಾಸಿಗಳು ಶಾಸಕರ ಎದುರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡುವುದಾಗಿ ಶಾಸಕರು ತಿಳಿಸಿದರು. ಗಾಳೆಮ್ಮನಗುಡಿಯಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ವೀಕ್ಷಣೆ ನಡೆಸಿ ಅದಕ್ಕೆ ಸೀಟು ಹೊದಿಕೆ ಅಳವಡಿಸಿ ಸರಿಪಡಿಸಲು ಸೂಚನೆ ನೀಡಿದರು. ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಶಾಸಕರು ಹೊಸಮಪಲನಗುಡಿ ಗ್ರಾಮಕ್ಕೆ ಬಂದರು. ಅಲ್ಲಿನ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಮಾತನಾಡಿದರು. ಶಾಲೆಯ ಕಟ್ಟಡ ಮತ್ತು ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರಿದರು. ಕೂಡಲೇ ಪೈಪಲೈನ್ ಕಾಮಗಾರಿಯನ್ನು ಸರಿ ಮಾಡಬೇಕು ಎಂದು ಶಾಸಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು. ಬದಲಿ ವಿದ್ಯುತ್ ಕಂಬ ಕೇಳಿದಾಗ, ವಿದ್ಯುತ್ ತಂತಿ ಹರಿದು ಬಿದ್ದಾಗ, ಹೊಸ ವಿದ್ಯುತ್ ಲೈನ್ ಸಂಪರ್ಕ ಬೇಕು ಎಂದು ಕೇಳಿದಾಗ ಜೆಸ್ಕಾಂ ಅಧಿಕಾರಿಗಳು ಕಿಂಚಿತ್ತು ನಮಗೆ ಸ್ಪಂದನೆ ನೀಡುತ್ತಿಲ್ಲ ಎಂದು ಹೊಸಮಲಪನಗುಡಿಯ ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಸ್ಪಂದನೆ ನೀಡಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕರು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಳಿಕ ಶಾಸಕರು ಹಳೆಯಮಲಪನಗುಡಿ ಗ್ರಾಮಕ್ಕೆ ಆಗಮಿಸಿದರು. ಹೊಸಮಲಪನಗುಡಿ ಶಾಲೆಗೆ ತೆರಳಿ ಅಲ್ಲಿನ ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಪರಿಶೀಲನೆ ನಡೆಸಿದರು. ತಾವೆ ಖುದ್ದು ಮಕ್ಕಳಿಗೆ ಅಡುಗೆ ಬಡಿಸಿದರು. ಮಕ್ಕಳಿಂದ ಕೈತುತ್ತು ಪಡೆದು ಆಹಾರದ ಗುಣಮಟ್ಟ ಪರೀಕ್ಷಿಸಿದರು. ಇದೆ ವೇಳೆ ಶಾಸಕರು ಶಿಥಿಲಾವಸ್ಥೆಯಲ್ಲಿದ್ದ ಹಳೆ ಮಲಪನಗುಡಿ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದ ವೀಕ್ಷಣೆ ನಡೆಸಿದರು. ಬಳಿಕ ಗ್ರಾಮದ ಓಣಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಇದೆ ವೇಳೆ ಶಾಸಕರು ಪರಿಶಿಷ್ಟ ಜಾತಿ ಸಮುದಾಯದ ಜನರು ವಾಸಿಸುವ ಓಣಿಗೆ ತೆರಳಿ ಅವರ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದರು. ಗ್ರಾಮಸ್ಥರೊಂದಿಗೆ ಆಪ್ತವಾಗಿ ಮಾತನಾಡಿ ಜನತೆಗೆ ಸ್ಪಂದನೆ ನೀಡಿದರು. ಗ್ರಾಮಸ್ಥರ ಬೇಡಿಕೆಗಳ ಬಗ್ಗೆ ಪಟ್ಟಿ ಮಾಡಿ ಮುಂದಿನ ಕ್ರಮ ವಹಿಸಲು ಹಳೆಯಮಲಪನಗುಡಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಹನುಮಂತಪ್ಪ ಕಂಬಾರ ಅವರಿಗೆ ಶಾಸಕರು ಸೂಚಿಸಿದರು.
ಇದೆ ವೇಳೆ ಶಾಸಕರು ಹತ್ತಿರದಲ್ಲಿದ್ದ ಎಲ್ ಭರಮಪ್ಪ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಶಾಸಕರು ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸಿದರು. ಹಳೆಯ ಪಮಲನುಡಗಿ ಗ್ರಾನದ ಸೌಜನ್ಯ ಎಸ್ಟೇಟ್ ಆವರಣದಲ್ಲಿ ಮಧ್ಯಾಹ್ನದ ವೇಳೆ ವೇದಿಕೆ ಕಾರ್ಯಕ್ರಮ ಆರಂಭವಾಗಿ ಸಂಜೆ 6 ಗಂಟೆವರೆಗೆ ನಡೆಯಿತು. ಸತತ 4 ಗಂಟೆಗು ಹೆಚ್ಚು ಕಾಲ ಶಾಸಕರು ಸಾವಧಾನದಿಂದ ಸಾರ್ವಜನಿಕರ ಅಹವಾಲು ಆಲಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಹರೀಶ್ ಅವರು ಅಚ್ಚುಕಟ್ಟಾಗಿ ಸಿದ್ದಪಡಿಸಿದ್ದ ಶಾಸಕರ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಒಬ್ಬೋಬ್ಬರಾಗಿ ಸಾಲಾಗಿ ಬಂದು ಶಾಸಕರಿಗೆ ತಮ್ಮ ತಮ್ಮ ಅಹವಾಲು ಸಲ್ಲಿಸಿದರು. ಶಾಸಕರು ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೊಂದಿಗೂ ಮಾತನಾಡಿ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಯ ಬಗ್ಗೆ ಪರಸ್ಪರ ಚರ್ಚಿಸಿ ಸಾರ್ವಜನಿಕರಿಗೆ ಸ್ಪಂದನೆ ನೀಡಿದ್ದರಿಂದಾಗಿ ಸಾರ್ವಜನಿಕರು ಶಾಸಕರ ಕಾಳಜಿ, ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೇಶನ, ವಸತಿ ಸೌಕರ್ಯಕ್ಕೆ ಕ್ರಮ ವಹಿಸಿ: ಶಾಸಕರಿಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಬಹುತೇಕ ಅರ್ಜಿಗಳು ಮನೆ ಕಟ್ಟಲು ಜಾಗ ಬೇಕು ಮತ್ತು ವಸತಿ ಸೌಕರ್ಯ ನೀಡಬೇಕು ಎನ್ನುವ ಬೇಡಿಕೆಯನ್ನು ಹೊಂದಿದ್ದವು. ಈ ಬಗ್ಗೆ ಪರಿಶೀಲಿಸಿದ ಶಾಸಕರು, ಗಾಳೆಮ್ಮನಗುಡಿ ಹತ್ತಿರದ ಕಲ್ಲುಗುಡ್ಡ ಪ್ರದೇಶ ಮತ್ತು ಮಲಪನಗುಡಿ ಹತ್ತಿರದ ಕಲ್ಲುಗುಡ್ಡ ಪ್ರದೇಶದಲ್ಲಿ ಬಂಡೆಗಳನ್ನು ಬ್ಲಾಸ್ಟ್ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾರಣಗಳಿಂದ ತೊಂದರೆ ಇಲ್ಲದ್ದಿದ್ದಲ್ಲಿ ಬಂಡೆಗಳನ್ನು ಬ್ಲಾಸ್ಟ್ ಮಾಡಿ ಸಮತಟ್ಟಾಗಿಸಿ ಗುಡ್ಡದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳುವ ವಿಧಾನದಲ್ಲಿ ಎಂಜಿನಿಯರಿAದ ಸೂಕ್ತವಾದ ಡಿಸೈನ್ ಮಾಡಿಸಿ ಆ ಜಾಗದಲ್ಲಿ ಅರ್ಹರಿಗೆ ನಿವೇಶನಗಳ ಹಂಚಿಕೆಗೆ ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಖಲೆ ಸೇರ್ಪಡೆಗೆ ಕ್ರಮ: ಸರ್ಕಾರಿ ಮತ್ತು ಖಾಸಗಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಸಾರ್ವಜನಿಕರು ಗ್ರಾಮ ಪಂಚಾಯತ್ ಪಟ್ಟಾ ಪುಸ್ತಕಗಳಿಗೆ ತಮ್ಮ ಆಸ್ತಿವಿವರ ಸೇರ್ಪಡೆಗೊಳಿಸಲು ಸಭೆಯಲ್ಲಿ ಸಾರ್ವಜನಿಕರು ಮನವಿ ಮಾಡಿದರು. ಕಾನೂನು ಪ್ರಕಾರ ನಿಯಮ ಏನು ಇದೆ ಎಂದು ಪರಿಶೀಲಿಸಿ ಈ ಬಗ್ಗೆ ಸರ್ಕಾರಕ್ಕೆ ಬರೆದು ಮಾರ್ಗದರ್ಶನ ಪಡೆದು ಅಧೀಕೃತವಾಗಿ ಅನುಮೋದಿತವಲ್ಲದ ಬಡಾವಣೆಗಳಲ್ಲಿ ಈಗಾಗಲೇ ನಿರ್ಮಿಸಿಕೊಂಡಿರುವ ಮನೆಗಳು ಆಸ್ತಿ ವಿವರಗಳನ್ನು ಗ್ರಾಮ ಪಂಚಾಯತ್ ದಾಖಲೆಗಳಿಗೆ ಸೇರ್ಪಡೆಗೊಳಿಸುವ ಕುರಿತು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ: ಆಯಾ ಗ್ರಾಮಸ್ಥರ ಬೇಡಿಕೆಯಂತೆ ಎಲ್ಲಾ ಕಡೆಗಳಲ್ಲಿ ಆದ್ಯತೆಯ ಮೇರೆಗೆ ಸಿಸಿ ರಸ್ತೆ ನಿರ್ಮಾಣ, ಚರಂಡಿ ಶುಚಿತ್ವ ಮತ್ತು ದುರಸ್ತಿಗೆ, ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಹೊಸಪೇಟೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಮಲಪನಗುಡಿಯ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ನಿರ್ದೇಶನ ನೀಡಿದರು.
ಪಿಎಚ್ಸಿ ಮೇಲ್ದರ್ಜೇಗೇರಿಸಲು ಕ್ರಮ: ಹಳೆಮಲಪನಗುಡಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24*7 ಆಗಿ ಮೇಲ್ದರ್ಜೆಗೇರಿಸಲು ಇದೆ ವೇಳೆ ಗ್ರಾಮಸ್ಥರು ಮನವಿ ಮಾಡಿದರು. ಈ ಕಾರ್ಯನುಷ್ಠಾನಕ್ಕಾಗಿ ಈ ಬಗ್ಗೆ ಕೂಡಲೇ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಶಾಸಕರು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ: ನಮ್ಮ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಬೇಕಿದೆ ಎಂದು ಆಯಾ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಕಡ್ಡಿರಾಂಪುರ, ಗಾಳೆಮ್ಮನಗುಡಿ, ಹೊಸ ಮಲಪನಗುಡಿ ಮತ್ತು ಹಳೆಮಲಪನಗುಡಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಇತರೆ ಅನುದಾನಗಳ ಒಗ್ಗೂಡಿಸುವಿಕೆಯೊಂದಿಗೆ ಕ್ರಮ ವಹಿಸಲು ಇದೆ ವೇಳೆ ಶಾಸಕರು. ತಾಪಂ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದರು.
ಮಕ್ಕಳೊಂದಿಗೆ ಬೆರೆತ ಶಾಸಕರು: ಜನ ಸಂಪರ್ಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅಹವಾಲು ಆಲಿಸಲು ಆಯಾ ಗ್ರಾಮಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಶಾಸಕರು ಆಯಾ ಗ್ರಾಮಗಳ ಎಲ್ಲಾ ಕಡೆಗಿನ ಅಂಗನವಾಡಿಗಳಿಗೆ ಮತ್ತು ಶಾಲೆಗಳಿಗೆ ಖುದ್ದು ಭೇಟಿ ನೀಡಿದ್ದು ವಿಶೇಷವಾಗಿತ್ತು. ಕಡ್ಡಿರಾಂಪುರ ತಾಂಡಾ, ಹೊಸಮಲಪನಗುಡಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರು ಮಕ್ಕಳಿಗೆ ನೀಡುವ ಆಹಾರವನ್ನು ಪರೀಕ್ಷಿಸಿದರು. ಇದೆ ವೇಳೆ ಅಂಗನವಾಡಿಯ ಬಾಲ ಮಕ್ಕಳೊಂದಿಗೆ ಫೋಟೊ ತೆಗೆಯಿಸಿಕೊಂಡು ಮಕ್ಕಳ ಸಂತಸದಲ್ಲಿ ಭಾಗಿಯಾದರು. ಸರ್ಕಾರದ ನಿರ್ದೇಶನದಂತೆ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಇನ್ನೀತರ ಸೌಲಭ್ಯ ನೀಡಲು ಕಾಳಜಿ ವಹಿಸಬೇಕು ಎಂದು ಇದೆ ವೇಳೆ ಶಾಸಕರು ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಸಹಾಯಕಿಯರಿಗೆ ನಿರ್ದೇಶನ ನೀಡಿದರು.
ಎಲ್ಕೆಜೆ, ಯುಕೆಜಿ ತರಗತಿಗೆ ಚಾಲನೆ: ಕಡ್ಡಿರಾಂಪುರ ತಾಂಡ, ಗಾಳೆಮ್ಮನಗುಡಿ, ಹೊಸ ಮಲಪನಗುಡಿ ಮತ್ತು ಹಳೆಮಲಪನಗುಡಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಆಯಾ ಗ್ರಾಮದ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜೆ ತರಗತಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಲಪನಗುಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಿಕಾ, ಉಪಾಧ್ಯಕ್ಷರಾದ ದೊರೆರಾಜ್, ಸಿಡಿಪಿಓ ಸಿಂದು ಅಂಗಡಿ, ಕಂದಾಯ, ಆಹಾರ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಆಯಾ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.