DYFI ಯಿಂದ ಏಕರೂಪ ನಾಗರೀಕ ಸಂಹಿತೆ ಅಸ್ತ್ರ ಪ್ರಯೋಗಕ್ಕೆ ವಿರೋಧ.

Loading

ಹೊಸಪೇಟೆ: ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಬಹು ಸಂಸ್ಕೃತಿಯ ಶ್ರೀಮಂತಿಕೆಯ ರಾಷ್ಟ್ರ ನಮ್ಮದು. ಕೇವಲ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕ್ಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಏಕರೂಪ ನಾಗರೀಕ ಸಂಹಿತೆ ಜಾರಿ ಮಾಡುವ ಮೂಲಕ ಜನರಲ್ಲಿನ ಐಕ್ಯತೆ ಒಡೆಯಲು ಮುಂದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಎ.ಎ ರಹೀಮ್ ಆರೋಪಿಸಿದರು.

ನಗರದ ಅಮೃತ ರೆಸಿಡೆನ್ಸಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಡಿವೈಎಫ್ಐ ರಾಜ್ಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ನಿರುದ್ಯೋಗ ಪ್ರಮಾಣ ವಿಪರೀತವಾಗಿ ಏರುತ್ತಿದೆ. ಉದ್ಯೋಗ ಸೃಷ್ಟಿಸಲು ವಿಫಲವಾದ ಸರಕಾರ ಇಂತಹ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತರುವ ಮೂಲಕ ರಾಜಕೀಯ ಲಾಭಕ್ಕೆ ಹವಣಿಸುತ್ತಿರುವುದು ಜನತೆಗೆ ಎಸಗುತ್ತಿರುವ ದ್ರೋಹವಾಗಿದೆ ಎಂದರು.

ಇತ್ತೀಚೆಗೆ ವರದಿ ನೀಡಿದ ಆಕ್ಸಪಾಮ್ ಸಂಸ್ಥೆಯು ರಾಷ್ಟ್ರದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಜನರ ಜೀವನ ವೆಚ್ಚವೂ ಅಧಿಕಗೊಂಡಿದೆ. ಇಂತಹ ಪ್ರಮುಖ ಬಿಕ್ಕಟ್ಟುಗಳನ್ನು ಪರಿಹರಿಸಲು ಕೇಂದ್ರ ಸರಕಾರ ತುರ್ತಾಗಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ನಿರುದ್ಯೋಗ ಹಾಗೂ ಕೋಮುವಾದಿ ನೀತಿಗಳನ್ನು ವಿರೋಧಿಸಿ, ಡಿವೈಎಫ್ಐ ಸಂಘಟನೆಯು ಕರ್ನಾಟಕ ಸೇರಿದಂತೆ ರಾಷ್ಟ್ರವ್ಯಾಪಿ ರಾಷ್ಟ್ರೀಯ ಜಾಥಾಗಳನ್ನು ಸಂಘಟಿಸಲು ನಿರ್ಧರಿಸಲಾಗಿದೆ. ಆ ಮೂಲಕ ಮೋದಿ ಸರಕಾರದ ಅಪಾಯಗಳ ಕುರಿತು ದೇಶದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ರಾಜ್ಯ ಪದಾಧಿಕಾರಿಗಳಾದ ಮಹೇಶ ಬಿಸಾಟಿ, ಸಂತೋಷ ಬಜಾಲ್, ಜಿಲ್ಲಾ ಅಧ್ಯಕ್ಷರಾದ ವಿ ಸ್ವಾಮಿ, ಕಾರ್ಯದರ್ಶಿ ಈಡಿಗರ ಮಂಜುನಾಥ ಸೇರಿದಂತೆ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *