ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ

Loading

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸಮಾಜ, ಪೋಷಕರು, ಶಿಕ್ಷಕರು,

ಇಲಾಖೆಯ ಸಾಂಘಿಕ ಪ್ರಯತ್ನ ಮುಖ್ಯ: ಜಿಪಂ ಸಿಇಓ ಸದಾಶಿವ ಪ್ರಭು ಬಿ

ಹೊಸಪೇಟೆ (ವಿಜಯನಗರ) : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಗರಿಬೊಮ್ಮನಹಳ್ಳಿಯ ಗುರುಭವನದಲ್ಲಿ ಜೂನ್ 25ರಂದು ನಡೆಯಿತು.
ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು, ಬಿಆರ್‌ಸಿ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ ಸುಧೀರ್ಘವಾಗಿ ವಿಶ್ಲೇಷಿಸಿದರು. ಬಳಿಕ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.


ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಿಇಓ ಅವರು, ಸಮಾಜ, ಪೋಷಕರು, ಶಿಕ್ಷಕರು, ಇಲಾಖೆ ಸೇರಿದಂತೆ ಎಲ್ಲರೂ ಪರಸ್ಪರ ಸಾಂಘಿಕ ಪ್ರಯತ್ನದಿಂದ ಮುಂದಿನ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಹೆಚ್ಚಿಸಲು ನಾವು ಪ್ರಯತ್ನಿಸಬೇಕಿದೆ ಎಂದರು.


ಜಿಲ್ಲೆಯಲ್ಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿಂದುಳಿಯುವಿಕೆಯಲ್ಲಿನ ಅಂಶಗಳನ್ನು ಗುರುತಿಸಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಒಂದು ಆತ್ಮೀಯ ಸಮಾಲೋಚನೆ ನಡೆಸಿ ವಿದ್ಯಾರ್ಥಿಯಲ್ಲಿನ ಕೀಳರಿಮೆ ಹೋಗಲಾಡಿಸಿ ಫಲಿತಾಂಶ ಹೆಚ್ಚಿಸಲು ಪೂರಕವಾದ ಅವಕಾಶವನ್ನು ಕಲ್ಪಿಸಬೇಕಿದೆ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿ ಗುಂಪುಗಳನ್ನು ರಚಿಸಿ ಒಂದು ಆರೋಗ್ಯಕರ ಸಂವಾದ ಏರ್ಪಡಿಸಿ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸಿ, ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಫಲಿತಾಂಶ ಸುಧಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.


ನರೇಗಾ ಯೋಜನೆಯಡಿಯಲ್ಲಿ ವಿಜಯನಗರ ಜಿಲ್ಲೆಗೆ ಕಳೆದ ವರ್ಷ 73 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ನಮ್ಮ ಜಿಲ್ಲೆಯಲ್ಲಿ 78 ಲಕ್ಷ ಮಾನವ ದಿನಗಳನ್ನು ಸೃಜನ ಮಾಡಲಾಗಿದ್ದು ಆ ಮೂಲಕ ಗುಳೇ ಹಾಗೂ ವಲಸೆಯನ್ನು ತಡೆಗಟ್ಟಲು ಪ್ರಯತ್ನಿಸಲಾಗುತ್ತಿದೆ. ಅಂದರೆ ಇದು ಇಲ್ಲಿನ ಪೋಷಕರು ಆರ್ಥಿಕವಾಗಿ ಸಬಲರಾಗಿಲ್ಲದಿರುವ ಅಂಶವನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶವನ್ನು ಸರ್ಕಾರಿ ಶಾಲೆಗಳು ನೀಡಿ, ಪೋಷಕರಲ್ಲಿ ಭರವಸೆ ಮೂಡಿಸಿ, ಮಗು ಉನ್ನತ ಶಿಕ್ಷಣ ಪಡೆದು ಆ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮದಾಗಿದೆ. ಆದಾಗ್ಯೂ ಪೋಷಕರು ಗುಳೇ ಹೋದಲ್ಲಿ ಅಂತಹ ಪೋಷಕರ ಮಕ್ಕಳನ್ನು ನಾವು ಅವರೊಟ್ಟಿಗೆ ಹೋಗಲು ಬಿಡದೆ ಅವರ ಮನವೊಲಿಸಿ ನಿರಂತರವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು.


ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಿ: ಗುಣಮಟ್ಟದ ಫಲಿತಾಂಶ ನೀಡಲು ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರದ ಪರಿವೀಕ್ಷಣೆಯ ವ್ಯವಸ್ಥೆ ಮಾಡಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಈ ವ್ಯವಸ್ಥೆಯು ನಿರಂತರ ಮುಂದುವರೆಯಲಿದ್ದು, ಇದಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಂದಿಕೊಳ್ಳಲೇಬೇಕು. ಇದನ್ನು ಒಪ್ಪಿಕೊಂಡು ನಾವು ಫಲಿತಾಂಶ ಸುಧಾರಣೆಯನ್ನು ತರುವಲ್ಲಿ ಶ್ರಮಿಸಬೇಕಿದೆ ಎಂದು ಸಿಇಓ ಅವರು ಸಲಹೆ ಮಾಡಿದರು.


ಗೈರುಹಾಜರಿ ತಡೆಯಿರಿ: ಗೈರು ಹಾಜರಿಯನ್ನು ತಡೆಯುವ ನಿಟ್ಟಿನಲ್ಲಿ ಮಗುವಿನ ಒಂದು ದಿನದ ಗೈರು ಹಾಜರಿಯನ್ನು ಸಹ ನಾವು ಗಂಭೀರವಾಗಿ ಪರಿಗಣಿಸಿ ಪೋಷಕರ ಮನವೊಲಿಸಿ ವಿದ್ಯಾರ್ಥಿಗಳನ್ನು ನಿರಂತರವಾಗಿ ಶಾಲೆಗೆ ಕಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ, ಎಸ್‌ಡಿಎಂಸಿಯ ಸಹಕಾರ ಪಡೆಯಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಗು ನನ್ನ ಶಾಲೆಯ ಆಸ್ತಿ, ಇದು ನಮ್ಮ ಶಾಲೆ ಎನ್ನುವ ಮನಸ್ಥಿತಿಯನ್ನು ನಾವು ತಂದುಕೊAಡು ಆ ಮೂಲಕ ಫಲಿತಾಂಶ ಸುಧಾರಣೆಗೆ ಪ್ರಥಮ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಸಿಇಓ ಅವರು ಸಲಹೆ ಮಾಡಿದರು.
ಅರ್ಪಣಾ ಮನೋಭಾವವಿರಲಿ: ದೇಶದಲ್ಲಿನ ನಿರುದ್ಯೋಗಕ್ಕೆ ಹೋಲಿಸಿದಾಗ ಉದ್ಯೋಗಿಗಳ ಅದರಲ್ಲೂ ಖಾಯಂ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ.

ಸುಯೋಗದಿಂದ ನಮಗೆ ದೊರೆತ ಸರ್ಕಾರಿ ನೌಕರಿಗೆ ನಾವು ನ್ಯಾಯ ಒದಗಿಸಿ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವಂತೆ ಸಿಇಓ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ(ಆಡಳಿತ) ಹನುಮಕ್ಕ, ಹಗರಿಬೊಮ್ಮನಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರು, ಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್ ಪೂಜಾರ್, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳಾದ ಶೇಖರಪ್ಪ ಹೊರಪೇಟೆ ಇದ್ದರು.

Leave a Reply

Your email address will not be published. Required fields are marked *