
ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿಗೆ ಪದವಿ ಕಾಲೇಜ್ ಆರಂಭ ಮತ್ತು ಎರಡನೇ ಹಂತದ ಏತ ನೀರಾವರಿ ಯೋಜನೆ ಅನುದಾನ, ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ವಿದ್ಯುತ್ ವಿತರಣಾ ಕೇಂದ್ರ ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಇವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಇವರು ಹೊಸಪೇಟೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.
ಈ ಕುರಿತು ಅಕ್ಕಿ ತೋಟೇಶ್ ಮಾತನಾಡಿ, ಈಗಾಗಲೇ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗಿದೆ. ಆದರೆ ಈವರೆಗಿನ ಸರ್ಕಾರಗಳು ಕಾಲೇಜು ಆರಂಭಕ್ಕೆ ಸ್ಪಂದನೆ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕೂಡಲೇ ಪದವಿ ಕಾಲೇಜು ಆರಂಭಿಸಬೇಕು. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಅವಶ್ಯಕತೆ ಇದ್ದು ಇದಕ್ಕೆ ಮಂಜೂರಾತಿ ನೀಡಬೇಕು, ತುಂಗಭದ್ರ ಜಲಾಶಯದಿಂದ 3.5 ಸಾವಿರ ಎಕರೆ ನೀರು ನೀರುಣಿಸಲು ಏತ ನೀರಾವರಿ ಇದ್ದು ಇದು ಕೇವಲ 1500 ಎಕರೆಗೆ ಮಾತ್ರ ನೀರುಣಿಸುತ್ತಿದೆ.
ಇದರಿಂದಾಗಿ 2 ಸಾವಿರ ಎಕರೆ ನೀರಾವರಿಯಿಂದ ವಂಚಿತವಾಗುತ್ತಿದೆ. ಇದಕ್ಕೆ 2ನೇ ಹಂತದ ಯೋಜನೆಯನ್ನು ಆರಂಭಿಸಲು ಅನುದಾನ ಒದಗಿಸಬೇಕೆಂದರು. ಈ ಕುರಿತಂತೆಯೂ ಜಿಲ್ಲಾ ಕೇಂದ್ರದ ವರೆಗೆ ಸುತ್ತಲಿನ ಗ್ರಾಮಸ್ಥರು ಪಾದಯಾತ್ರೆ ನಡೆಸಿದ್ದರೂ ಫಲಕಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ತಂಬ್ರಹಳ್ಳಿ ಗ್ರಾಮದಲ್ಲಿರುವ 12.5 ಎಂವಿಎ ವಿದ್ಯುತ್ ವಿತರಣಾ ಟ್ರಾನ್ಸಪಾರ್ಮರ್ ನ್ನು ಬದಲಾವಣೆ ಮಾಡಿ 20 ಎಂವಿಎಗೆ ಮೇಲ್ದರ್ಜೆಗೆ ಏರಿಸುವ ಕೆಲಸ ಜರೂರಾಗಿ ಆಗಬೇಕಿದೆ. ಮಂಜೂರಾತಿ ಆಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದು ಕಾಮಗಾರಿ ಈವರೆಗೆ ನಡೆದಿರುವುದಿಲ್ಲ ಈಗಾಗಲೇ ಬೇಸಿಗೆ ಪ್ರಾರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ವಿದ್ಯುತ್ ಒದಗಿಸಲು ತೊಂದರೆ ಆಗುತ್ತದೆ. ಆದ್ದರಿಂದ ಬೇಗನೆ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದರು.