
ಹಗರಿಬೊಮ್ಮನಹಳ್ಳಿ :ಇಂಗ್ಲಿಷ್ ವ್ಯಾಮೋಹದಿಂದ ಮಾತೃಭಾಷೆಯಲ್ಲಿ ಕಲಬೆರಕೆ ಸೇರಿಸಿ ಕಂಗ್ಲೀಷ್ ನಂತೆ ಮಾತನಾಡುವ ಶೈಲಿಯನ್ನು ಕೈಬಿಡಬೇಕು ಸ್ವಚ್ಛ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಅಧ್ಯಕ್ಷ ಅಶೋಕ್ ಉಪ್ಪಾರ ಹೇಳಿದರು.

ಪಟ್ಟಣದ ರಾಮನಗರದಲ್ಲಿನ ಶ್ರದ್ಧಾ ಯೋಗಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯನಗರ ಜಿಲ್ಲಾ ಘಟಕ ಮತ್ತು ಹಬೊಹಳ್ಳಿ ತಾಲೂಕು ಘಟಕದಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. 17 ನೇ ಶತಮಾನದಲ್ಲಿ ಕವಿ ಮಹಾಲಿಂಗರಂಗ ಅನುಭಾವಮೃತದಲ್ಲಿ ಕನ್ನಡ ಭಾಷೆಯ ಬಗ್ಗೆ ಅದ್ಭುತವಾಗಿ ವರ್ಣಿಸಿದ್ದಾರೆ. ಕನ್ನಡ ಭಾಷೆಯನ್ನು ಸುಲಿದ ಬಾಳೆಹಣ್ಣುನಂತೆ, ಸಿಗುರಿನ ಕಬ್ಬಿನಂತೆ, ಕುದಿಸಿ ಹಾರಿಸಿದ ಹಾಲಿನಂತೆ ಸುಲಭದ ಲಲಿತಹ ಕನ್ನಡ ಭಾಷೆಯನು ತಿಳಿದು ತನ್ನೊಳ ತಾನೇ ಮೋಕ್ಷ ಗಳಿಸಿಕೊಳ್ಳಬಹುದು ಎಂದು ವರ್ಣಿಸಲಾಗಿದೆ. ಕನ್ನಡಿಗರಿಗೆ ಅಂಗ್ಲ ಭಾಷೆಯ ವ್ಯಾಮೋಹ ಸರಿಯೇ? ಎಂದು ಪ್ರಶ್ನಿಸಿದರು. ಎಲ್ಲಾ ಭಾಷೆಗಳ ಕಲಿಕೆಗೆ ಉತ್ಸಾಹವಿದ್ದರೂ, ಕನ್ನಡ ಭಾಷೆ ಕಲಿಸುವ ಪ್ರೋತ್ಸಾಹವು ನಮ್ಮಲ್ಲಿರಲಿ. ಮಾತೃಭಾಷೆ ಬಳಕೆಯಲ್ಲಿ ಇಂಗ್ಲೀಷ್ ಸೇರಿಸಿ ಕಂಗ್ಲೀಷ್ ಮಾತನಾಡುವ ಶೈಲಿಯನ್ನು ಬಿಟ್ಟು ಸ್ವಚ್ಛ ಕನ್ನಡ ಮಾತನಾಡುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಬಳ್ಳಾರಿಯ ಮೇಧಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರಾದ ಡಾ.ಸುಮಾ.ವೈ ಉಪನ್ಯಾಸದಲ್ಲಿ ಮಾತನಾಡಿ, ಕಾವೇರಿ ನದಿಯಿಂದ ಗೋದಾವರಿ ನದಿಯ ವ್ಯಾಪ್ತಿಯವರೆಗೆ ಕನ್ನಡ ನಾಡು ಇತ್ತು ಎಂಬುದನ್ನು ಕವಿರಾಜಮಾರ್ಗ ಕೃತಿಯಲ್ಲಿ ಶ್ರೀವಿಜಯ ಬರೆದಿದ್ದಾರೆ. ಸರಿಸುಮಾರು ದೇಶದ ಅರ್ಧ ಭೂಭಾಗದಲ್ಲಿ ಕನ್ನಡ ನೆಲೆಸಿತ್ತು ಎಂದು ಅನೇಕ ಉದಾಹರಣೆ ಮೂಲಕ ತಿಳಿಯಬಹುದಾಗಿದೆ. ಬ್ರಿಟಿಷರ ಕಾಲದಲ್ಲಿ ವ್ಯಾಪಾರಕ್ಕಾಗಿ ಹಾಗೂ ಆಡಳಿತಾತ್ಮಕವಾಗಿ ಅನುಕೂಲವಾಗುವಂತೆ ಪ್ರಾದೇಶಿಕವಾಗಿ ವಿಭಜನೆ ಮಾಡುತ್ತ ಹೋದಂತೆ ಭಾಷಾವಾರು ಪ್ರಾಂತಗಳಾಗಿ ಮಾರ್ಪಟ್ಟವು. ಆದರೆ ಕನ್ನಡ ನಾಡು, ನುಡಿ ಸಾಹಿತ್ಯಕ್ಕೆ ರಾಷ್ಟ್ರೀಯತೆಯ ಪರಿಕಲ್ಪನೆಯಿಂದ ಅಧ್ಯಯನ ಮಾಡಿದಾಗ ದೇಶದ ಪ್ರಮುಖ ನಾಡು ಕರ್ನಾಟಕ ರಾಜ್ಯ ರಾಷ್ಟ್ರೀಯತೆಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದರು.

ಅಭಾಸಾಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದೇಶಪಾಂಡೆ ಪ್ರಾಸ್ತಾವಿಕ ನುಡಿದರು. ಜಿಲ್ಲಾ ಪದಾಧಿಕಾರಿಗಳಾದ ಅಭಿನಂದನ ಜೋಶಿ, ವೀರನಗೌಡ, ಪ್ರಮುಖರಾದ ಸಂತೋಷ ಪೂಜಾರ್, ಬ್ರಹ್ಮಾನಂದ ಗುತ್ತಲ್, ಆನಂದ್ ಕಡ್ಲಿ, ಕೊಟ್ರೇಶ್ ತಳವಾರ, ಮಂಜುನಾಥ್ ಕೌಲೂರು, ಯು.ವೀರೇಶ್, ವೀರೆಂದ್ರ ಉತ್ತಂಗಿ, ನವೀನ್ ಎಲಿಗಾರ, ದಿವಾಕರಗೌಡ ಇತರರಿದ್ದರು. ತಾಲೂಕು ಕಾರ್ಯದರ್ಶಿ ಎಲ್.ಶಿವಕುಮಾರ್ ಸ್ವಾಗತಿಸಿದರು, ಸವಿತಾ ರಮೇಶ್ ವಂದಿಸಿದರು. ರಮೇಶ್ ಬೆಲ್ಲಂಕೊಂಡ ನಿರ್ವಹಿಸಿದರು.