
ಹಗರಿಬೊಮ್ಮನಹಳ್ಳಿ: ಡಾ.ಸ್ವಾಮಿನಾಥನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿರುವುದು ರೈತ ವಿರೋಧಿಯಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯಹರಿಹಾಯ್ದರು.
ತಾಲೂಕಿನ ಕೃಷ್ಣಪುರ ಗ್ರಾಮದಲ್ಲಿ ರೈತ ಸಂಘದ ನೂತನ ಗ್ರಾಮಘಟಕ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹಾಕಿದ ಬಂಡವಾಳಕ್ಕಿಂತ ಶೇ.23ಕ್ಕಿಂತ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ರೈತಾಪಿ ವರ್ಗದ ಕುಟುಂಬದ ಶ್ರಮ ಲೆಕ್ಕಕ್ಕಿಲ್ಲದಂತಾಗಿದೆ. ರೈತರು ಭೂಮಿಯ ಬಾಡಿಗೆ, ಕೃಷಿ ಸಾಧನಗಳ ಬಾಡಿಗೆ ಲೆಕ್ಕ ಹಾಕಿದಾಗ ನಷ್ಟದ ಪ್ರಮಾಣ ತಿಳಿದುಬರುತ್ತದೆ.

ಕೇಂದ್ರ ಸರ್ಕಾರ ಕೃಷಿಭೂಮಿ ಉಳಿಬಾರದು ಎಂದು, ರೈತರ ಭೂಮಿಯನ್ನು ಬಾಡಿಗೆ ಕೊಡುವ ಕಾರ್ಯಕ್ರಮದ ಮೂಲಕ ರೈತರ ವಿರುದ್ದ ಹುನ್ನಾರ ನಡೆಸಿದೆ. ಕಂಪನಿಯವರಿಗೆ ಭೂಮಿಯನ್ನು ಲೀಜ್ ಕೊಟ್ಟು ರೈತರಿಗೆ ಹಣದ ಆಮಿಷ ತೋರಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಕರ್ನಾಟಕದ 58ನಗರಗಳಲ್ಲಿ ಮಾಲ್ ಸಂಸ್ಕೃತಿ ಇರುವುದರಿಂದ, ಸಾಮಾನ್ಯ ರೈತರ ಮಾರುಕಟ್ಟೆ ವ್ಯವಸ್ಥೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯ ರಸ್ತೆಯಲ್ಲಿ ಭತ್ತ ನಾಟಿ: ನೂತನ ರೈತರ ಸಂಘ ಆರಂಭಿಸಲು ಬಂದ ರೈತಸಂಘದ ಮುಖಂಡರು, ಕೃಷ್ಣಪುರ ಗ್ರಾಮದ ಮುಖ್ಯ ರಸ್ತೆಯನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮುಜುಗರ ಉಂಟಾಗುವಂತೆ ಮಾಡಿದರು. ಕಳೆದ 10ವರ್ಷಗಳಿಂದ ಈ ರಸ್ತೆ ಹೀಗಿದ್ದರು ಕೂಡ ಯಾವ ಜನಪ್ರತಿನಿಧಿಗಳು ಗಮನಹರಿಸಿಲ್ಲ. ಗ್ರಾಪಂನವರು ಮಣ್ಣುಹಾಕಿ ರಿಪೇರಿ ಮಾಡಿದರು ಸಾರ್ಥಕವಾಗಿಲ್ಲ.

ಈ ಮುಖ್ಯ ರಸ್ತೆಯಲ್ಲಿಯೇ ಭತ್ತಬೆಳೆದು ಕ್ಷೇತ್ರದ ಶಾಸಕರಿಂದ ಭತ್ತದ ರಾಶಿ ಪೂಜೆ ಮಾಡಿಸಿದಾಗ, ರಸ್ತೆ ಅಭಿವೃದ್ಧಿಗೆ ಮುಂದಾಗುತ್ತಾರೋ ಕಾದುನೋಡೋಣ ಎಂದು ರೈತ ಸಂಘದವರು ಕಿಡಿಕಾರಿದರು. ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ, ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ ಮಾತನಾಡಿದರು. ರೈತ ಸಂಘದ ಮುಖಂಡರಾದ ರಾಮೇಶ್ವರ ಬಂಡಿ ಬಸವನಗೌಡ, ವಿ.ನಾಗೇಂದ್ರಪ್ಪ, ಬಣಕಾರ ಒಪತ್ತೇಶ್ವರ, ಗಡ್ಡಿ ನಿಂಗಪ್ಪ, ಗೂಡ್ತಾನೂರು ವಸಂತ, ನಾಗಲಾಪುರ ವೀರಣ್ಣ, ತಳವಾರ ಸುರೇಶ, ಪಕ್ಕೀರಪ್ಪ ಇತರರಿದ್ದರು. ನೂತನ ಪದಾಧಿಕಾರಿಗಳು: ಕೃಷ್ಣಪುರ ಗ್ರಾಮದ ನೂತನ ರೈತಸಂಘದ ಪದಾಧಿಕಾರಿಗಳು ಗೌರವಾಧ್ಯಕ್ಷ ಟಿ.ವಿ. ಪರಶುರಾಮ, ಅಧ್ಯಕ್ಷ ಕೆ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕೆ.ನಾಗೇಂದ್ರ, ಖಜಾಂಚಿ ಕೆ. ಶ್ರೀನಿವಾಸ, ಟಿ.ಮಂಜುನಾಥ, ಕಾರ್ಯಾಧ್ಯಕ್ಷ ಮರಿಸ್ವಾಮಿ, ಬಂಡಿ ಸೋಮಪ್ಪ, ಟಿ.ಗೋವಿಂದ, ಕೆ.ಆನಂದಪ್ಪ, ಕರಿ ಬಸವರಾಜ್, ಮಾಹಾಂತೇಶ್, ಉಪಾಧ್ಯಕ್ಷರಾಗಿ ಪಾಂಡುರಂಗ, ಚಿನ್ನಪ್ಪ, ಹಳ್ಳಿ ವೆಂಕಟೇಶ್, ಜಿ.ಲಕ್ಷ್ಮಣ, ಶಿವಕುಮಾರ ಆಯ್ಕೆಯಾಗಿದ್ದಾರೆ.