ಹೊಸಪೇಟೆ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ವತಿಯಿಂದ ನಡೆಯುತ್ತಿರುವ ಅರ್ನಿಷ್ಟಾವಧಿ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಹೂವಿನಹಡಗಲಿ ತಾಪಂ ಇಒ ಮಾತನಾಡಿ, ಅ.4ರಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಿದ್ದು, ಈವರೆಗೂ ನಮ್ಮ ಬೇಡಿಕೆಗಳಿಗೆ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ದೊರೆತಿಲ್ಲ. ಹಾಗಾಗಿ ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಜಿಪಂಗಳ ಎದುರು ಧರಣಿ ಮುಂದುವರೆಸಲು ರಾಜ್ಯ ಒಕ್ಕೂಟದ ನಿರ್ಧರಿಸಿದೆ ಎಂದರು.
ಬೇಡಿಕೆಗಳು:ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು. ವರ್ಗಾವಣೆ ನಿಯಮಗಳ ಬದಲಾವಣೆಗೆ ಮುನ್ನ ಸಂಘದ ಸಲಹೆ ಪಡೆಯಬೇಕು. ಪಿಡಿಒ ಹುದ್ದೆಯನ್ನು ಗ್ರೂಪ್ ಬಿ. ಗೆ ಉನ್ನತೀಕರಿಸಬೇಕು. ಪಿಡಿಒ ಹುದ್ದೆ ಸೃಜನೆಯಾಗಿ ಹದಿನೈದು ವರ್ಷವಾದರೂ ಉನ್ನತೀಕರಿಸಿಲ್ಲ. ಹುದ್ದೆಗಳ ಭರ್ತಿ ಮತ್ತು ಪದೋನ್ನತಿಯಲ್ಲಿ ನ್ಯಾಯ ಸಿಕ್ಕಿಲ್ಲ. ಕಳೆದ ಐದು ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇವುಗಳ ಜತೆಗೆ ಒಕ್ಕೂಟದ ಬೇಡಿಕೆಗಳು ಈಡೇರುವವರೆಗೆ ಧರಣಿ ನಡೆಸಲಾಗುವುದು ಎಂದರು.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಲ್.ಚಂದ್ರನಾಯ್ಕ, ಸಂಘದ ಕವಿತಾ ಕರ್ಣಂ, ಜಿ.ಶಶಿಧರ್, ಪ್ರಕಾಶ್ ಎಚ್., ವೀರಣ್ಣ ನಾಯ್ಕ, ಕೊಟ್ರೇಶ್, ಮಂಜುನಾಥ, ಕೆ.ನಾಗಪ್ಪ, ಗಂಗಾಧರ್, ಟಿ.ಇ.ಉಮೇಶ್, ರಾಜೇಶ್ವರಿ, ಉಮಾ ಕಾಳೆ, ಭರತ್, ಪುಷ್ಪಲತಾ, ತಿಪ್ಪೇಸ್ವಾಮಿ, ಮಹೇಂದ್ರ, ಮಲ್ಲಿಕಾರ್ಜುನ, ಹನುಮಂತ, ಜಿಲಾನ್, ಬಸಲಿಂಗ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಎಸ್.ಡಿ.ಎ.ಎ, ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಗಳು ಇದ್ದರು.