ಹೊಸಪೇಟೆ : 2024-25ನೇ ಸಾಲಿನ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮುಂಗಾರು ಹಂಗಾಮಿಗೆ ಆಗಸ್ಟ್ 31 ರೊಳಗೆ ಮತ್ತು ಹಿಂಗಾರು ಹಂಗಾಮಿಗೆ ನವ್ಹೆಂಬರ್ 30 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕೃಷಿ ಪ್ರಶಸ್ತಿಗೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 40 ಸಾವಿರ ಮತ್ತು ತೃತೀಯ ಬಹುಮಾನ 35 ಸಾವಿರ ರೂ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ ಮತ್ತು ತೃತೀಯ ಬಹುಮಾನ 20 ಸಾವಿರ ನೀಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ಮತ್ತು ತೃತೀಯ ಬಹುಮಾನ 5 ಸಾವಿರ ರೂ ನೀಡಲಾಗುತ್ತದೆ. ಪ್ರಸಕ್ತ ಸಾಲಿನಿಂದ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕವನ್ನು ರದ್ದುಪಡಿಸಲಾಗಿರುತ್ತದೆ.
ಕೃಷಿ ಪಂಡಿತ ಪ್ರಶಸ್ತಿಗೆ ಪ್ರಥಮ ಬಹುಮಾನ 1,25,000 ರೂ., ದ್ವಿತೀಯ ಬಹುಮಾನ 1,00,000 ರೂ., ತೃತೀಯ ಬಹುಮಾನ 75,000 ರೂ ಹಾಗೂ ಉದಯೋನ್ಮುಖ ಕೃಷಿ ಪಂಡಿತ ಬಹುಮಾನಕ್ಕೆ 50,000 ರೂ ನೀಡಲಾಗುತ್ತದೆ.
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಉಂಟುಮಾಡಿ ಅತಿ ಹೆಚ್ಚು ಇಳುವರಿ ಪಡೆಯುವ ರೈತರಿಗೆ “ಕೃಷಿ ಪ್ರಶಸ್ತಿ” ನೀಡುವ ಮೂಲಕ ಉತ್ತೇಜಿಸಲಾಗುತ್ತಿದೆ. ಕೃಷಿ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದ ಕೃಷಿ ಪರಿಣಿತರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಯಾವ ಬೆಳೆಗೆ ಸ್ಪರ್ಧೆ: ಭತ್ತ ಮುಂಗಾರು(ನೀರಾವರಿ), ಭತ್ತ ಮುಂಗಾರು (ಮಳೆಯಾಶ್ರಿತ), ರಾಗಿ ಮುಂಗಾರು (ಮಳೆಯಾಶ್ರಿತ), ಶೇಂಗಾ ಮುಂಗಾರು (ಮಳೆಯಾಶ್ರಿತ), ತೊಗರಿ ಮುಂಗಾರು (ಮಳೆಯಾಶ್ರಿತ), ಮುಸುಕಿನ ಜೋಳ ಮುಂಗಾರು (ಮಳೆಯಾಶ್ರಿತ), ನವಣೆ ಮುಂಗಾರು (ಮಳೆಯಾಶ್ರಿತ), ಸಜ್ಜೆ ಮುಂಗಾರು (ಮಳೆಯಾಶ್ರಿತ), ಜೋಳ ಹಿಂಗಾರು (ಮಳೆಯಾಶ್ರಿತ), ಕಡಲೆ ಹಿಂಗಾರು (ಮಳೆಯಾಶ್ರಿತ) ಈ ಬೆಳೆಗಳಿಗೆ ರೈತರು ಸ್ಪರ್ಧಿಸಬಹುದಾಗಿದೆ.
ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿ ಅರ್ಜಿ ನಮೂನೆಯನ್ನು ಅಳವಡಿಸಲಾಗಿರುತ್ತದೆ. ಸಿಟಿಜನ್ ಲಾಗಿನ್ ಮತ್ತು ಆರ್ಎಸ್ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಸೇವಾ ಕೇಂದ್ರ ಅಥವಾ ರೈತ ಮಹಿಳೆಯರು ಪ್ರತ್ಯೇಕವಾಗಿ ಸದರಿ ಕೆ-ಕಿಸಾನ್ ಪೋರ್ಟಲ್ನಡಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್ಐಡಿ ಬಳಸಿಕೊಂಡು ಆಸಕ್ತ ರೈತರು, ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.