
ಕೂಡ್ಲಿಗಿ :- ದೇಶಕ್ಕೆ ಸ್ವಾತಂತ್ರö್ಯ ಸಿಕ್ಕು 78 ವರ್ಷ ಗತಿಸಿದರು ಸಾಕಷ್ಟು ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿ ನಾನಾ ಮೂಲಸೌಕರ್ಯಗಳಿಲ್ಲದೇ ನರಳುತ್ತಿವೆ ಎನ್ನುವುದಕ್ಕೆ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಕೆಸರು ಗದ್ದೆಯಾದ ಗುಂಡಿಯ ರಸ್ತೆಯಲ್ಲಿ ಸಾಗಿದ ಶಾಲಾ ಮಕ್ಕಳ ಪ್ರಭಾತ್ಪೇರಿ ಮುಖ್ಯ ಸಾಕ್ಷಿಯಾಗಿತ್ತು.
ಇದು ಇನ್ನೊಂದು ಮುಖ್ಯ ಗಮನಿಸಬೇಕಾದ ಸಂಗತಿ ಎಂದರೆ ಗ್ರಾಪಂ ಕಚೇರಿ ಇರುವ ರಸ್ತೆಯಲ್ಲಿಯೇ ಮಳೆ ಬಂದಾಗಲೆಲ್ಲಾ ನೀರು ನಿಲ್ಲುತ್ತಿದ್ದು, ಅದಕ್ಕೆ ರಸ್ತೆಯ ವ್ಯವಸ್ಥೆ ಸರಿಪಡಿಸುವಲ್ಲಿ ಗ್ರಾಮಪಂಚಾಯಿತಿ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಗ್ರಾಮದ ಇಲ್ಲಿರುವ ನಿವಾಸಿಗಳು ಓಡಾಡಲು ತೀವ್ರ ತೊಂದರೆಯಾಗುತ್ತಿದೆ.
ಬುಧವಾರ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿ ಹೆಚ್ಚಿನ ನೀರು ನಿಂತಿದ್ದು, ಅದೇ ನೀರಿನಲ್ಲೇ ಸರಕಾರಿ ಹಿರಿಯ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಭಾತ್ಪೇರಿ ನಡೆಸಿದ್ದು, ಶಿಕ್ಷಕರು ಸಹ ಮಕ್ಕಳ ಜೊತೆ ಇದೇ ಕೆಸರಿನ ರಸ್ತೆಯಲ್ಲಿ ಹೆಜ್ಜೆ ಹಾಕಿದ್ದರು.
ಭಾರತಾಂಬೆಯ ಛದ್ಮವೇಷಧಾರಿ : ಓರ್ವ ವಿದ್ಯಾರ್ಥಿನಿಯನ್ನು ಭಾರತಾಂಬೆ ವೇಷಧಾರಿಯಾಗಿ ಮಾಡಿ ಪ್ರಭಾತಪೇರಿಯಲ್ಲಿ ಭಾಗವಹಿಸಿ ಇದೇ ಮಳೆ ನೀರು ನಿಂತ ರಸ್ತೆಯಲ್ಲೇ ಹೋಗುತ್ತಿದ್ದದ್ದನ್ನು ಕಂಡ ಗ್ರಾಮದ ಪ್ರಜ್ಞಾವಂತರು ‘ಹೇ..ಭಾರತಾಂಬೆ ಈ ಅವ್ಯವಸ್ಥೆಯನ್ನು ನೀನೇ ಕಣ್ಣಾರೆ ನೋಡಮ್ಮ’ ಎಂದು ಗ್ರಾಮಾಭಿವೃದ್ಧಿಯ ಕುರಿತು ವ್ಯಂಗ್ಯದ ಮಾತುಗಳನ್ನಾಡಿದ್ದು ಮಾತ್ರ ಅಲ್ಲಿದ್ದವರ ಕಿವಿಗೆ ತಾಗಿತ್ತು.