
ಹಗರಿಬೊಮ್ಮನಹಳ್ಳಿ : ಕಡಿಮೆ ಮಾತು ಕೆಲಸ ಜಾಸ್ತಿ, ಗಾಂಧೀಜಿಯ ತತ್ವದಂತೆ ಸರಳ ಜೀವನ, ಬಸವಾದಿ ಶರಣರ ಪ್ರಭಾವಕ್ಕೆ ಒಳಗಾದ ಅಕ್ಕಿ ಕೊಟ್ರಪ್ಪನವರ ಅಗಲಿಕೆಯಿಂದ ಧಾರ್ಮಿಕ ಶೈಕ್ಷಣಿಕ ಕ್ಷೇತ್ರ ಬಡವಾಗಿದೆ ಎಂದು ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ತಂಬ್ರಹಳ್ಳಿಯಲ್ಲಿ ದಿವಂಗತ ಅಕ್ಕಿ ಕೊಟ್ರಪ್ಪವರ ಶಿವಗಣಗರಾಧನೆ ನಿಮಿತ್ಯ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಕಿ ಕೊಟ್ರಪ್ಪನವರ ಅಗಲಿಕೆಯಿಂದ ಬಳ್ಳಾರಿ ವಿಜಯನಗರ ಜಿಲ್ಲೆ ಅಲ್ಲದೆ ಇಡೀ ಸಮಾಜಕ್ಕೆ
ತುಂಬಲಾರದ ನಷ್ಟ ಆಗಿದೆ. ಒಬ್ಬ ವ್ಯಕ್ತಿ ಸಾಧನೆಯನ್ನು ನೋಡಿ ಜಗತ್ತೇ ತಲೆ ಬಾಗಬೇಕು ಅನ್ನುವ ಮಾತಿದೆ ಅಂತ ವ್ಯಕ್ತಿ ಜಗತ್ತಿಗೆ ವಿದಾಯ ಹೇಳಿದರೇ ದೇವಾನುದೇವತೆಗಳು ಕೂಡ ಕಣ್ಣೀರು ಸುರಿಸುತ್ತವಂತೆ, ಅಂತಹ ಮೇರು ವ್ಯಕ್ತಿತ್ವದ ಅಕ್ಕಿ ಕೊಟ್ರಪ್ಪನವರಾಗಿದ್ದಾರೆ ಎಂದು ಬಣ್ಣಿಸಿದರು.
ಬಸವಣ್ಣನವರ ಕಾಯಕ ತತ್ವ ದಾಸೋಹ ಪರಂಪರೆ ಇಡೀ ಜೀವನದಲ್ಲಿ ಅಳವಡಿಸಿಕೊಂಡ ಏಕೈಕ ವ್ಯಕ್ತಿ, ಪ್ರಾಮಾಣಿಕವಾಗಿ ದುಡಿದ ಹಣವನ್ನು ದಾನದ ರೂಪದಲ್ಲಿ ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಇವರಿಗೆ ಮಠದಿಂದ ಬಸವದಳ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಇದರಿಂದ ನಮ್ಮ ಮಠದ ಗೌರವ ಹೆಚ್ಚಾಗಿದೆ. ಅಕ್ಕಿ ಕೊಟ್ರಪ್ಪ
ನವರು ದೇಹದಿಂದ ದೂರಾದರೂ ಆಗಾಗ್ಗೆ ಮಠಕ್ಕೆ ಬಂದು ಗಿಡಗಳನ್ನು ನೆಟ್ಟಿದ್ದಾರೆ. ಗಿಡದ ರೂದಲ್ಲಿ ಅವರನ್ನು ನಿತ್ಯ ನೋಡುತ್ತಿದ್ದೇವೆ.ಗ್ರಾಮದ ಕೊಟ್ಟೂರೇಶ್ವರ ಮಠದ ಅಭಿವೃದ್ಧಿ ಗದಗ ತೋಂಟದಾರ್ಯ ಮಠಕ್ಕೆ 75 ಲಕ್ಷ ರೂ, ನಮ್ಮ ಸಂಡೂರು ಮಠಕ್ಕೆ 1ಲಕ್ಷರೂ, ತಂಬ್ರಹಳ್ಳಿ ಪಿಯುಸಿ ಕಾಲೇಜಿಗೆ 5 ಲಕ್ಷ, ಇದಲ್ಲದೆ ಡಿಗ್ರಿ ಕಾಲೇಜು ಆರಂಭಿಸಿದರೆ 20 ಲಕ್ಷ ನೀಡುವುದಾಗಿ ಹೇಳಿದ್ದರು, ಅವರ ಕಂಡ ಕನಸು ನನಸಾಗಬೇಕಾದರೆ ಗ್ರಾಮದಲ್ಲಿ ಡಿಗ್ರಿ ಕಾಲೇಜಿಗೆ ಕುಟುಂಬದವರು ಶ್ರಮ ಪಟ್ಟರೇ ಅವರ ಆತ್ಮಕ್ಕೆ ನಿಜವಾದ ಶಾಂತಿ ದೊರಕುತ್ತದೆ ಎಂದರು.
ಸುಕ್ಷೇತ್ರ ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ ಅಕ್ಕಿ ಕೊಟ್ರಪ್ಪನವರಿಗೆ ಗ್ರಾಮದ ಬಂಡೆ ರಂಗನಾಥ ನಾಥೇಶ್ವರ ಸ್ವಾಮಿ ರಥ ನಿರ್ಮಾಣದ ಕಾರ್ಯ ಹಾಗೂ ಗ್ರಾಮ ದೇವತಾ ಜಾತ್ರೆಯ ಉಸ್ತುವಾರಿಯನ್ನು ನೀಡಲಾಗಿತ್ತು, ಇದರ ಜಮಾ ಖರ್ಚು ಹಣದ ವಿಚಾರದಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸಿ ಪುಸ್ತಕ ರೂಪದಲ್ಲಿ ಇಡೀ ಗ್ರಾಮದವರಿಗೆ ನೀಡಿ ಮಾದರಿಯಾಗಿದ್ದಾರೆ. ಸಮಾಜದ ಹಣ ಹೇಗೆ ವಿನಿಯೋಗ ಮಾಡಬೇಕು ಎನ್ನುವುದನ್ನು ಕೊಟ್ರಪ್ಪನವರು ತೋರಿಸಿಕೊಟ್ಟು ಮುಂದಿನ ಪೀಳಿಗೆಯವರಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಈ ವೇಳೆ ಮಲ್ಲನ ಕೇರಿ ಚನ್ನಬಸವ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಹಾಲ ಶಂಕರ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಸಂಡೂರಿನ ಬೊಪ್ಪಕಾನ್ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್ ಬಿ. ನಾಗನಗೌಡ್ರು, ಸಾಹಿತಿ ಮೇಟಿ ಕೊಟ್ರಪ್ಪ, ವೀರಶೈವ ಪಂಚಮಸಾಲಿ ಸಮಾಜದ ಮುಖಂಡ ಬಾವಿ ಬೆಟ್ಟಪ್ಪ ಇತರರು ಮಾತನಾಡಿದರು,
ಕಾರ್ಯಕ್ರಮಕ್ಕೂ ಮುನ್ನಾ ಗದಗ ಡಂಬಳ ಸಂಸ್ಥಾನ ಮಠದ ಸಿದ್ದರಾಮೇಶ್ವರ ಮಹಾ ಸ್ವಾಮೀಜಿ ದಿ.ಕೊಟ್ರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕೊಟ್ರಪ್ಪನವರ ಪತ್ನಿ ಅಕ್ಕಿ ಕೊಟ್ರಮ್ಮ, ಪಂಚಮಸಾಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಅಕ್ಕಿ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಅಕ್ಕಿ ಬಸವರಾಜ್, ಗೌರಜ್ಜನವರ ಬಸವರಾಜ್ ಹಾಗೂ ಅಪಾರ ಬಂಧುಗಳು ಇತರರು ಇದ್ದರು.
ಪಟ್ಟಣಶೆಟ್ಟಿ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.