ನಿಮ್ಮ ಬರಹಕ್ಕೆ ನಮ್ಮ ಸೇತುವೆ ವಿಶೇಷ ಸಂಚಿಕೆ

ನಮ್ಮ ತಾಯ್ನಾಡು ಭರತ ಭೂಮಿಯ ಭವ್ಯ ಸಂಸ್ಕೃತಿಯ ಘನತೆಯನ್ನು ಪ್ರಪಂಚಕ್ಕೆ ಪರಿಚಯಿಸಿ ಕೊಟ್ಟಂತಹ ಕೀರ್ತಿ ವೀರಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.
“ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಸ್ವಾಮಿ ವಿವೇಕಾನಂದರು ನಮ್ಮ ಭಾರತೀಯ ಯುವ ಜನತೆಗೆ ಕರೆನೀಡಿದರು.ತಮ್ಮ ಬೋಧನೆಗಳ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಯುವಕರನ್ನು ಪ್ರೇರೇಪಿಸಿದರು.ಇಂದು ಅವರ 161ನೇ ಜಯಂತಿ.ಅವರ ಜನ್ಮದಿನವನ್ನು1984ರಿಂದಲೂ ಪ್ರತಿವರ್ಷ ದೇಶದಾದ್ಯಂತ ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಯುವಕರನ್ನು ಪ್ರೇರೇಪಿಸಲು ಹಾಗೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತಲುಪಿಸುವ ಮೂಲಕ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ರಾಷ್ಟ್ರೀಯ ಯುವ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.ಈ ದಿನದಂದು ನಾಡಿನೆಲ್ಲೆಡೆ ವಿವಿಧ ಕಾರ್ಯಕ್ರಮಗಳು,ಉಪನ್ಯಾಸಗಳು,ವಿಚಾರ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.
ಸ್ವಾಮಿ ವಿವೇಕಾನಂದರು ಯುವ ಜನತೆಯನ್ನು ಕುರಿತು ಹಲವಾರು ಭಾಷಣ ಹಾಗೂ ಉಪನ್ಯಾಸಗಳನ್ನು ಮಾಡಿದರು.ಅತ್ಯಮೂಲ್ಯವಾದ ನುಡಿಗಳನ್ನಾಡುವ ಮೂಲಕ ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ.ಯುವ ಸಮೂಹದ ಮೇಲೆ ಅಪಾರವಾದ ನಂಬಿಕೆ ಮತ್ತು ಅಭಿಮಾನವನ್ನು ಹೊಂದಿದ್ದರು.”ಯುವಕರೇ ನಮ್ಮ ದೇಶದ ನಿಜವಾದ ಆಸ್ತಿ” ಎಂದು ತಮ್ಮ ಪ್ರತಿ ಭಾಷಣದಲ್ಲಿ ಸಾರಿ ಸಾರಿ ಹೇಳಿದ್ದಾರೆ.”ಯುವ ಸಮೂಹ ನಮ್ಮ ದೇಶದ ಉಜ್ವಲ ಭವಿಷ್ಯದ ರೂವಾರಿಗಳು”.ಯುವಕರು ಮನಸ್ಸು ಮಾಡಿದರೆ ಬೇಕಾದುದನ್ನು ಸಾಧಿಸ ಬಲ್ಲರು.ಆದರೆ ಅವರಲ್ಲಿ ಶ್ರದ್ಧೆ,ಏಕಾಗ್ರತೆ ಮತ್ತು ಆತ್ಮವಿಶ್ವಾಸ ಇರಬೇಕು. ಹಾಗಾಗಿ ಯುವಕರು ದೃಢಸಂಕಲ್ಪದಿಂದ ಕಾರ್ಯಪ್ರವೃತ್ತರಾಗಬೇಕು.ಬಡತನ,ಅನಕ್ಷರತೆ,ಅನಾಚಾರ ಮೊದಲಾದವುಗಳನ್ನು ನಿವಾರಿಸಲು ಪಣತೊಡಬೇಕು.
ಅದಕ್ಕಾಗಿ ಮೊದಲು ಯುವಕರು ವಿದ್ಯೆ ಕಲಿಯಬೇಕು. ದೇಶದ ಅಭಿವೃದ್ಧಿಗೆ ಬೇಕಾದ ಶಕ್ತಿ,ಶಾಂತಿ,ಧೈರ್ಯ ಮತ್ತು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು.ಯುವಕರು ಸದಾ ಕ್ರಿಯಾಶೀಲರಾಗಿರಬೇಕು.ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಮಾತ್ರ ಯಶಸ್ಸೆಂಬ ಬೆಳದಿಂಗಳು ದೊರೆಯಲು ಸಾಧ್ಯ.ಹಾಗಾಗಿ ಯುವಕರು ಸದಾ ಪ್ರಯತ್ನಿಶೀಲರಾಗಿರಬೇಕು.ಸಮುದ್ರವನ್ನು ದಾಟಬೇಕಾದರೆ ಉಕ್ಕಿನಂಥಹ ಗಟ್ಟಿ ಮನಸ್ಸಿರಬೇಕು.ಎತ್ತರದ ಪರ್ವತವನ್ನು ಕೊರೆದುಕೊಂಡು ಸಾಗಬಲ್ಲ ಕೆಚ್ಚು ನಮ್ಮಲ್ಲಿರಬೇಕು ಎಂದು ವಿವೇಕಾನಂದರು ಯುವ ಸಮೂಹವನ್ನು ಉದ್ದೇಶಿಸಿ ಕರೆ ನೀಡುವ ಮೂಲಕ ಅವರ ಭವಿಷ್ಯದ ಬಾಳಿಗೆ ದಾರಿದೀಪವಾಗಿದ್ದಾರೆ.
ಆದರೆ ವಿಪರ್ಯಾಸವೇನೆಂದರೆ,ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಬೆನ್ನು ಬಿಡದ ಬೇತಾಳದಂತೆ ಅವುಗಳಲ್ಲಿಯೇ ಮುಳಗಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ದುರಂತವೇ ಸರಿ.ನಾವು ಸಮಯವನ್ನು ಹಾಳು ಮಾಡುವುದರಿಂದ ಅದು ನಮ್ಮನ್ನು ಹಾಳು ಮಾಡುತ್ತದೆ.ಗತಿಸಿ ಹೋದ ಕಾಲ ಮತ್ತೇ ಹಿಂದಿರುಗಿ ಬರುವುದಿಲ್ಲ.ಆದ್ದರಿಂದ “ಜೀವನದ ಒಂದೊಂದು ನಿಮಿಷವು ಕೋಟಿ ಸುವರ್ಣ ನಾಣ್ಯಗಳಿಗಿಂತಲೂ ಅಧಿಕ ಬೆಲೆ ಬಾಳುವಂತದ್ದು.ಅದೇನಾದರೂ ನಷ್ಟವಾದರೆ ಅದಕ್ಕಿಂತ ಹೆಚ್ಚಿನ ನಷ್ಟವು ಬೇರೊಂದಿಲ್ಲ” ಎಂಬ ಚಾಣಕ್ಯರ ಮಾತನ್ನು ನಮ್ಮ ಇಂದಿನ ಯುವ ಸಮೂಹ ಸ್ಮರಿಸಿಕೊಂಡು ಸಮಯವನ್ನು ವ್ಯರ್ಥ ಮಾಡದೆ ಅದನ್ನು ವ್ಯವಸ್ಥಿತವಾಗಿ ಸದುಪಯೋಗಪಡಿಸಿಕೊಂಡು ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕಾದದ್ದು ಅವರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.ಈ ಶುಭ ದಿನದಂದು ಯುವಕರು ತಮ್ಮಷ್ಟಕ್ಕೇ ತಾವೇ ದೃಢ ಸಂಕಲ್ಪವನ್ನು ಮಾಡಿಕೊಳ್ಳುವ ಮುಖೇನ ದಿವ್ಯ ಪುರುಷರಾದ ವಿವೇಕಾನಂದರಿಗೆ ಗೌರವ ಸಮರ್ಪಿಸುವಂತಾಗಲಿ.
ಯುವ ಸಮೂಹದ ಅಭಿವೃದ್ಧಿಗೆ ಬೇಕಾದ ಅವಶ್ಯಕತೆಗಳನ್ನು ಹಾಗೂ ಅವರ ಬಯಕೆಗಳನ್ನು ಈಡೇರಿಸಬೇಕಾದದ್ದು ಪ್ರತಿ ಪೋಷಕರು,ಸಮಾಜ ಮತ್ತು ಸರ್ಕಾರದ ಮುಖ್ಯ ಕರ್ತವ್ಯವಾಗಿದೆ.ಆ ಮೂಲಕ ಯುವಕರು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆಗೈದು ಯಶಸ್ಸಿನ ಶಿಖರದ ತುತ್ತ ತುದಿಯನ್ನು ಮುಟ್ಟಲು ಮೆಟ್ಟಿಲುಗಳಾಗಬೇಕಾಗಿದೆ.

ಲೇಖನ : ಎಲ್.ಹಾಲ್ಯಾನಾಯ್ಕ (ಗೋಸಿಂಹಾ)
ಜಿಲ್ಲಾಧ್ಯಕ್ಷರು
ಕ.ಚು.ಸಾ.ಪ., ವಿಜಯನಗರ ಜಿಲ್ಲೆ
ಮೊ: 9480 493968