
ಹೊಸಪೇಟೆ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ತುಂಗಭದ್ರ ಡ್ಯಾಂನಲ್ಲಿ ಕಳೆದ ಎರಡು ದಿನಗಳಿಂದ ಕರಡಿ ಹಾವಳಿ ಶುರುವಾಗಿದೆ. ಇಂದು ಬೆಳಗಿನ ಜಾವವೂ ಜಾಂಬವAತ ಕಾಣಿಸಿಕೊಂಡಿದ್ದು, ಭದ್ರತಾ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.
ತುಂಗಭದ್ರಾ ಡ್ಯಾಂ ವೈಕುಂಠ ಗೆಸ್ಟ್ ಹೌಸ್ಗೆ ತೆರಳುವ ಮಾರ್ಗ, ಎಸ್ಡಿಒ ಕಚೇರಿ ಹಾಗೂ ಉದ್ಯಾನ ಭಾಗದಲ್ಲಿ ಸತತ ಎರಡು ದಿನಗಳಿಂದ ಕರಡಿಯೊಂದು ತಡ ರಾತ್ರಿಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ.
ಬುಧವಾರ ಬೆಳಗಿನ ಜಾವ ೧೨ ಗಂಟೆ ಸುಮಾರಿಗೆ ಡ್ಯಾಂನ ಮುಖ್ಯಧ್ವಾರದಿಂದ ವೈಕುಂಠ ಅತಿಥಿ ಗೃಹಕ್ಕೆ ತೆರಳುವ ಮಾರ್ಗದಲ್ಲಿ ಕಾಣಿಸಿಕೊಂಡಿತ್ತು. ಕರಡಿ ಕಾಣಿಸಿಕೊಳ್ಳುತ್ತಿದ್ದಂತೆ ನಾಯಿಗಳು ಜೋರಾಗಿ ಬೊಗಳಲು ಆರಂಭಿಸಿವೆ. ಈ ವೇಳೆ ಕರ್ತವ್ಯದಲ್ಲಿದ್ದ ಓರ್ವ ಕೆಎಸ್ಐಎಸ್ಎಫ್ ಪೇದೆ ಹಾಗೂ ಎಸ್ಐಎಸ್ ಭದ್ರತಾ ಸಿಬ್ಬಂದಿ ಕರಡಿಯನ್ನು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಅದು ಇವರತ್ತ ಹೆಜ್ಜೆ ಹಾಕುತ್ತಿದ್ದರಿಂದ ಅವರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ವಲ್ಪದರಲ್ಲಿ ಕರಡಿ ದಾಳಿಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಇದೇ ವೇಳೆ ಮೇನ್ಗೇಟ್ನಿಂದ ಮೇಲ್ಭಾಗಕ್ಕೆ ಗಸ್ತು ಬರುತ್ತಿದ್ದ ಎಎಸ್ಐ ಲಕ್ಷö್ಮಣ ಅವರಿಗೂ ಎದುರಾಗಿದ್ದು, ಕ್ಷಣ ಮಾತ್ರದಲ್ಲಿ ಅವರು ಬೈಕ್ ತಿರುಗಿಸಿಕೊಂಡು ವಾಪಸ್ ಹೋಗಿದ್ದಾರೆ. ಗುರುವಾರ ಬೆಳಗಿನಜಾವ ಉದ್ಯಾನದ ಬಳಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರ ಡ್ಯಾಂನಲ್ಲಿ ಕರಡಿ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಹಾಕಾಳಿ ಭಕ್ತರಿಗೆ ಎಸ್ಐಎಸ್ ಭದ್ರತೆ:
ಇಲ್ಲಿನ ಟಿಬಿ ಡ್ಯಾಂ ವಸತಿ ಗೃಹ, ವೆಂಕೈ ಕ್ಯಾಂಪ್, ಪಿಎಲ್ಸಿ ಭಾಗದ ನೂರಾರು ಮಹಿಳೆಯರು ನವರಾತ್ರಿ ನಿಮಿತ್ತ ಸೂರ್ಯೋದಯಕ್ಕೂ ಮುನ್ನವೇ ಟಿಬಿ ಡ್ಯಾಂ ಒಳ ಆವರಣದಲ್ಲಿ ಮಹಾಕಾಳಿ ದೇವಿಯ ದರ್ಶನಕ್ಕೆ ಬರುತ್ತಾರೆ. ಇದೀಗ ಕರಡಿ ಹಾವಳಿಯಿಂದಾಗಿ ಡ್ಯಾಂ ಕಾಯುವ ಜತೆಗೆ ಮಹಾಕಾಳಿ ಭಕ್ತರಿಗೂ ಭದ್ರತೆ ಒದಗಿಸುವಂತಾಗಿದೆ. ಪ್ರತಿ ೧೦- ೧೫ ಜನ ಮಹಿಳೆಯರ ಗುಂಪಿನೊAದಿಗೆ ಒಬ್ಬಿಬ್ಬರು ಎಸ್ಐಎಸ್, ಪೊಲೀಸ್ ಸಿಬ್ಬಂದಿಯನ್ನು ಕಳುಹಿಸುವಂತಾಗಿದೆ.