
ಹಗರಿಬೊಮ್ಮನಹಳ್ಳಿ : ಪ್ರಪ್ರಥಮ ಬಾರಿಗೆ ಪಟ್ಟಣದ ಗಾಳೆಮ್ಮ ಗುಡಿ ಯಿಂದ ಮಿನಿ ವಿಧಾನಸೌಧ ವರೆಗೆ ನೂತನ ‘ ಸಿಟಿ ಬಸ್’ ಓಡಾಟಕ್ಕೆ ಶ್ರಾವಣ ಮಾಸದ ಕೊನೆಯ ಸೋಮವಾರದ ಬೆಳಗ್ಗೆ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ.ನೇಮಿರಾಜ್ ನಾಯ್ಕ್ ಅವರು ಚಾಲನೆಯನ್ನು ನೀಡಿದ್ದಾರೆ.
ಪಟ್ಟಣದ ಆರಾಧ್ಯದೇವಿ ಗಾಳೆಮ್ಮದೇವಿ ದೇವಸ್ಥಾನದಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ್ ಅವರು ಬಸ್ ಗೆ ಪೂಜೆ ಸಲ್ಲಿಸಿ, ಹತ್ತು ರೂಪಾಯಿ ಟಿಕೆಟ್ ಖರಿದಿಸಿ, ಬಸ್ ನಲ್ಲಿ ಮಿನಿ ವಿಧಾನಸೌಧದ ವರೆಗೂ ಪ್ರಯಾಣಿಸಿದರು. ಬಸ್ ಸಾಗಿ ಬಂದ ದಾರಿಯುದ್ದಕ್ಕೂ ನೆರೆದಿದ್ದ ನಾಗರೀಕರು ಶಾಸಕರತ್ತ ಕೈ ಬೀಸುವ ಮೂಲಕ ಸಿಟಿ ಬಸ್ ಸರ್ವಿಸ್ ಆರಂಭಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಚಂದ್ರಶೇಖರಗಾಳಿ, ಬಿಇಓ ಮೈಲೇಶ್ ಬೇವೂರ್, ಸಾರಿಗೆ ಡಿಪೋ ವ್ಯವಸ್ಥಾಪಕಿ ದೊಡ್ಡಬಸಮ್ಮ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ ಸೇರಿದಂತೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿವರ್ಗದವರು, ಶಾಸಕರ ಬೆಂಬಲಿಗರು ಟಿಕೆಟ್ ಧಾರಿಗಳಾಗಿ ಸಿಟಿ ಬಸ್ ಪ್ರಯಾಣದಲ್ಲಿ ಶಾಸಕರಿಗೆ ಜೊತೆಯಾದರು.
ಈ ಬಸ್ಸಿನಲ್ಲಿ ಪಟ್ಟಣದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು 10 ರೂಪಾಯಿ ಗಳನ್ನು ನಿಗದಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸರಿಯಾದ ದರವನ್ನು ದೂರ ಅನುಸರವಾಗಿ ನಿಗದಿ ಮಾಡಲಾಗುವುದೆಂದು ದೊಡ್ಡ ಬಸಮ್ಮ ಡಿಪೋ ಮ್ಯಾನೇಜರ್ ಅವರು ತಿಳಿಸಿದ್ದಾರೆ.
ಪಟ್ಟಣದ ಹೊರ ವಲಯದ ಎಂಬಿ.ಕಾಲೋನಿ ಬಳಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾದಾಗ ಅವಸರದಲ್ಲಿಯೇ ಮಿನಿ ವಿಧಾನಸೌಧವನ್ನು ಉದ್ಘಾಟಿಸಲಾಯ್ತು. ಹಳೇ ತಾಲೂಕ ಕಚೇರಿ ಯಿಂದ ಇದು ಮೂರು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಿ,ಬರಲು ತಾಲೂಕಿನ ಜನರಿಗೆ ಇದು ತೀವ್ರ ತೊಂದರೆ ಆಗುತ್ತದೆ ಎನ್ನುವ ಸಾಕಷ್ಟು ದೂರುಗಳಿದ್ದವು.
ಇದನ್ನು ಮನಗಂಡ ಶಾಸಕರು ಪಟ್ಟಣದ ಗಾಳೆಮ್ಮ ದೇವಿ ದೇವಸ್ಥಾನ ದಿಂದ ಮಿನಿ ವಿಧಾನಸೌಧದ ತನಕ ನಗರ ಸಾರಿಗೆ ಆರಂಭಕ್ಕೆ ಮುನ್ನಡಿ ಬರೆದು, ಆ ಮೂಲಕ ನಾಗರೀಕರಿಗೆ ಆಗಬಹುದಾದ ಕಿರಿಕಿರಿಯನ್ನು ತಪ್ಪಿಸುವ ಕೆಲಸ ಮಾಡಿದ್ದಾರೆ.ಇದೇ ವೇಳೆ ಹಗರಿಬೊಮ್ಮನಹಳ್ಳಿ ತಾಲೂಕಿನ ಜನತೆಗೆ ನೂತನ ನಗರ ಸಾರಿಗೆ ಸಂಚಾರದ ಸೌಲಭ್ಯವನ್ನು ಹಬ್ಬದ ಕೊಡುಗೆಯಾಗಿ ನೀಡುವ ಮೂಲಕ ಶ್ರಾವಣಮಾಸವನ್ನು ಅವಿಸ್ಮರಣಿಯ ವಾಗಿಸುವ ಶಾಸಕರ ಕಾರ್ಯಕ್ಕೆ ತಾಲೂಕಿನಾದ್ಯಂತ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.