ಹೊಸಪೇಟೆ: ನಗರಸಭೆಯಲ್ಲಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ನಾಲ್ವರು ನೌಕರರನ್ನು ಅಮಾನತುಗೊಳಿಸಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಕಚೇರಿ ವ್ಯವಸ್ಥಾಪಕ ಬಿ. ಕೃಷ್ಣಮೂರ್ತಿ ಅವರನ್ನು ಅಮಾನತು ಮಾಡಲು ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ನಗರಸಭೆಯ ಅಭಿಲೇಖಾಲಯದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾರ ಅಭಿಲೇಖಾಲಯ ವಿಷಯ ನಿರ್ವಾಹಕ ಸುರೇಶ್ ಬಾಬು ಡಿ.ಎಚ್., ದ್ವಿತೀಯ ದರ್ಜೆ ಸಹಾಯಕ ಎಸ್. ಸುರೇಶ್, ಪ್ರಭಾರ ಕರ ವಸೂಲಿಗಾರರಾದ ಎನ್. ಯಲ್ಲಪ್ಪ ಮತ್ತು ಎಚ್. ಶಂಕರ ಅವರನ್ನು ನಗರಸಭೆ ಪೌರಾಯುಕ್ತ ಬಿ.ಟಿ. ವಡ್ಡರ ಅವರ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.
ಹೊಸಪೇಟೆ ನಗರಸಭೆಯಲ್ಲಿ ಕೆಲ ಮಹತ್ವದ ಕಡತಗಳು ನಾಪತ್ತೆಯಾಗಿರುವ ದೂರು ಬಂದಿದೆ ಎಂದು ಈ ಕಡತಗಳನ್ನು ಭೌತಿಕವಾಗಿ ತೋರಿಸಲು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನೌಕರರಿಗೆ ನೋಟಿಸ್ ನೀಡಿದಾಗ ತಪ್ಪು ಮಾಹಿತಿ ನೀಡಿದ್ದಾರೆ. ನಗರಸಭೆಯಲ್ಲಿ ಕೆಲವು ಡಿಮ್ಯಾಂಡ್ ರಿಜಿಸ್ಟರ್, ಕೆಎಂಎಫ್ 24 ರಿಜಿಸ್ಟರ್ಗಳು ಇಲ್ಲವೆಂದು ಒಮ್ಮೆ ಹೇಳಿದರೆ, ಮತ್ತೊಮ್ಮೆಲಭ್ಯ ಇವೆ ಎಂದು ಹೇಳಿದ್ದಾರೆ. ಈ ರೀತಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದು, ಈ ನೌಕರರು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ್ದು, ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ವಹಿಸಲು ಶಿಫಾರಸು ಮಾಡಿ ನಗರಸಭೆ ಪೌರಾಯುಕ್ತ ಬಿ.ಟಿ. ಬಂಡಿವಡ್ಡರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

