
ಕನಕಗಿರಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಹಿಂಭಾಗದಲ್ಲಿರುವ ಕಲಾಭವನದಲ್ಲಿ ನೂತನ ತಾಲೂಕು ಪಂಚಾಯತ್ ಕಚೇರಿಯನ್ನು ಆರಂಭಿಸಲಾಗಿದ್ದು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಕಚೇರಿಯನ್ನು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಈ ಮುಂಚೆ ತಾಲೂಕು ಪಂಚಾಯತ್ ಕಚೇರಿಯು ತಾತ್ಕಾಲಿಕವಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಇತ್ತು. ಅಲ್ಲಿನ ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ಇದ್ದಿದ್ದರಿಂದ ಇದೀಗ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿದ್ದ ಕಲಾಭವನವನ್ನು ನವೀಕರಣಗೊಳಿಸಿ ತಾ.ಪಂ ಕಚೇರಿಯನ್ನು ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಿದೆ ಎಂದು ಕಚೇರಿಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನಂತರ ನೂತನ ತಾ.ಪಂ ಕಚೇರಿಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ತಹಶೀಲ್ದಾರ್ ವಿಶ್ವನಾಥ ಮುರಡಿ, ಸಹಾಯಕ ನಿರ್ದೇಶಕ (ಪಂ.ರಾ) ವೀರಣ್ಣ ನಕ್ರಳ್ಳಿ, ತಾಲೂಕು ಯೋಜನಾಧಿಕಾರಿ ರಾಜಶೇಖರ್ ಸೇರಿದಂತೆ ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.