ಕನಕಗಿರಿ : ಮಣ್ಣು ಅಮೃತಕ್ಕೆ ಸಮಾನ ಅಂತ ಮಣ್ಣನ್ನು ನಾವು ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿ ಜಿಲ್ಲಾ ಪಂಚಾಯತಿಯ ಮೂಲಕ ರಾಷ್ಟ್ರ ರಾಜಧಾನಿಗೆ ಕಳುಹಿಸಿಕೊಡಲಾಗುತ್ತಿದ್ದು, ಇಂತಹ ಐತಿಹಾಸಿಕ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿಯ ಆವರಣದಲ್ಲಿ ತಾಲೂಕು ಪಂಚಾಯತ್ ಕನಕಗಿರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯತಿಗಳು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಪೂರ್ಣಗೊಂಡ ಸವಿನೆನಪಿಗಾಗಿ ಪ್ರತಿ ಗ್ರಾಮ ಪಂಚಾಯತಿಯಿಂದ ಮಣ್ಣು ಸಂಗ್ರಹಿಸುವ ಮೂಲಕ ಜನರಲ್ಲಿ ಮಣ್ಣು ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ದೇಶವು ಉತ್ತಮ ಪರಿಸರ, ಹವಾಗುಣ ಹೊಂದಿರಲು ಇಲ್ಲಿನ ಮಣ್ಣಿನ ಗುಣ ಮುಖ್ಯವಾಗಿದೆ. ಅನೇಕ ಮಹಾತ್ಮರ ಹೋರಾಟದಿಂದಾಗಿ ಮತ್ತು ತ್ಯಾಗದಿಂದಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆದು ಅಭಿವೃದ್ದಿಯತ್ತ ಸಾಗುತ್ತಿದೆ ಎಂದರು.
ತಾಲೂಕಿನ 11 ಗ್ರಾಮ ಪಂಚಾಯತಿಗಳಿಂದ ತರಲಾಗಿದ್ದ ಮಣ್ಣನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದ ಮಣ್ಣಿನ ಮಡಿಕೆಗಳಲ್ಲಿ ತಾಲೂಕು ಕೇಂದ್ರಕ್ಕೆ ತರಲಾಗಿತ್ತು. ಇದೇ ವೇಳೆಯಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕ್ರಮ ಹಿನ್ನೆಲೆಯಲ್ಲಿ ವೃತ್ತಾಕಾರವಾಗಿ ನನ್ನ ಮಣ್ಣು, ನನ್ನ ದೇಶ ಎನ್ನುವ ಸಂದೇಶದ ಅಕ್ಷರಗಳು ಗಮನ ಸೆಳೆದವು.
ನಂತರ ಮಣ್ಣಿನ ಮಹತ್ವವನ್ನು ಸಾರುವ ಪಂಚಪ್ರಾಣ ಶಪತವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಬೋಧಿಸಿದರು. ಬಳಿಕ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಮಣ್ಣನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಅಮೃತ ಕಳಸಕ್ಕೆ ಹಾಕುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ತಾಲೂಕು ಯೋಜನಾಧಿಕಾರಿ ರಾಜಶೇಖರ್, ತಾಲೂಕಿನ ವಿವಿಧ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ತಾ.ಪಂ ಸಿಬ್ಬಂದಿಗಳು, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
